ದಾವಣಗೆರೆ: ಬಿಜೆಪಿ ಮೈತ್ರಿ ಧರ್ಮ ಪಾಲನೆ ಪಾಲಿಸುತ್ತಿಲ್ಲ. ಜೆಡಿಎಸ್ ವರಿಷ್ಠರ ಸೂಚನೆ ಬರುವವರೆಗೂ ಜೆಡಿಎಸ್ ಕಾರ್ಯಕರ್ತರು ತಟಸ್ಥರಾಗಬೇಕು. ಈ ಬಾರಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸುಲಭವಲ್ಲ ಎಂದು ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್ ಎಚ್ಚರಿಸಿದರು.
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಬಿಜೆಪಿಗೆ ಒಳಬೇಗುದಿ ಗೆಚ್ಚಾಗಿದೆ. ಗಾಯತ್ರಿ ಸಿದ್ದೇಶ್ವರ ಅವರಿಗೆ ಬಿಜೆಪಿ ಟಿಕೆಟ್ ನೀಡಿರುವುದಕ್ಕೆ ಬಿಜೆಪಿ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ವಿರೋಧ ವ್ಯಕ್ತವಾಗಿದೆ. ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ಎಂ. ಪಿ. ರೇಣುಕಾಚಾರ್ಯ, ಮಾಡಾಳ್ ಮಲ್ಲಿಕಾರ್ಜುನ್, ಬಸವರಾಜ್ ನಾಯ್ಕ್, ಹರಪನಹಳ್ಳಿಯ ಕರುಣಾಕರ ರೆಡ್ಡಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬಿಜೆಪಿ ಮೊದಲು ಭಿನ್ನಮತ ಸರಿಪಡಿಸಿಕೊಂಡು ಮೈತ್ರಿ ಧರ್ಮ ಪಾಲನೆ ಆಗಲೇಬೇಕು ಎಂದರು.
ಬಿಜೆಪಿ ಮೈತ್ರಿ ಧರ್ಮ ಪಾಲನೆಗಾಗಿ ನಾವು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದೇವೆ. ಭಿನ್ನಮತ ಸರಿಪಡಿಸಿಕೊಳ್ಳದಿದ್ದರೆ ನಾವು ಚುನಾವಣೆಗೆ ನಿಲ್ಲುತ್ತೇವೆ. ನಮಗೆ ಚುನಾವಣೆ ಹೊಸದಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ಗೆಲುವು ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.
ಆಂಧ್ರಪ್ರದೇಶಕ್ಕೆ ನರೇಂದ್ರ ಮೋದಿ ಅವರು ಬಂದಾಗ ಮಾಜಿ ಸಿಎಂ ಚಂದ್ರಬಾಬು ನಾಯ್ಡು, ಖ್ಯಾತ ನಟ ಪವನ್ ಕಲ್ಯಾಣ್ ಅವರ ಜೊತೆ ವೇದಿಕೆ ಹಂಚಿಕೊಂಡರು. ಆದ್ರೆ, ಕಲ್ಬುರ್ಗಿ ಹಾಗೂ ಶಿವಮೊಗ್ಗಕ್ಕೆ ಆಗಮಿಸಿದಾಗ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಿಲ್ಲ. ಹೇಗೆ ಮೈತ್ರಿ ಧರ್ಮ ಪಾಲನೆ ಮಾಡಿದಂತಾಗುತ್ತದೆ. ಇದು ಪಕ್ಷಕ್ಕೆ ಮಾಡಿದ ಅವಮಾನ ಎಂದರು.
ಕಾಂಗ್ರೆಸ್ ಹಾಗೂ ಬಿಜೆಪಿ ಒಳ ಒಪ್ಪಂದವಾಗಿದೆ. ಮಾವ, ಅಳಿಯ ಎಂದುಕೊಂಡು ಚುನಾವಣೆ ಎದರಿಸುತ್ತಾರೆ. ಶಿವಮೊಗ್ಗದಲ್ಲಿ ಬಿ. ವೈ. ರಾಘವೇಂದ್ರ ಅವರು ಪ್ರತಿನಿಧಿಸುವ ಬಿಜೆಪಿಗೆ ಮತ ಹಾಕಿ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಇದನ್ನು ನೋಡಿದರೆ ಒಳ ಒಪ್ಪಂದ ಆಗಿದೆ ಎಂಬುದಾಗಿ ಜನರೇ ಮಾತನಾಡುತ್ತಿದ್ದಾರೆ.
ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರು ನನಗೆ ಕರೆ ಮಾಡಿದ್ದರು.ಮೊದಲು ನಿಮ್ಮ ಗೊಂದಲ ಸರಿಪಡಿಸಿಕೊಳ್ಳಿ, ನಮ ವರಿಷ್ಠರು ಇನ್ನೂ ಆದೇಶ ನೀಡಿಲ್ಲ. ಇದಕ್ಕೆ ಕಾಯುತ್ತಿದ್ದೇವೆ. ಸೂಚನೆ ಬಂದ ಬಳಿಕ ಕಾರ್ಯೋನ್ಮುಖರಾಗುತ್ತೇವೆ ಎಂದರು. ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದ , ರಾಮಚಂದ್ರಮೂರ್ತಿ, ಟಿ. ಅಸ್ಗರ್, ಬಾತಿ ಶಂಕರ್ , ಗಾದ್ರಿ ರಾಜು, ಎನ್.ಗಂಗಾಧರಪ್ಪ, ಕುಬೇರಪ್ಪ ಹೆಚ್ .ಕೆ ಬಸವರಾಜ್, ಉಸ್ಮಾನ್ ಶರೀಫ್, ಜೆ. ಅಮಾನುಲ್ಲಾ ಖಾನ್ ಮತ್ತಿತರರು ಹಾಜರಿದ್ದರು.



