ಬೆಂಗಳೂರು: ಬುಧವಾರ (ಮಾ.13) ರಾಜ್ಯದ ಹಲವೆಡೆ ಮಳೆಯಾಗಿದೆ. ಮೂಲಕ ಬಿರು ಬಿಸಿಲಿನ ತಾಪಮಾನಕ್ಕೆ ಬಳಲಿದ್ದ ಧರೆಗೆ ವರುಣ ತಂಪರೆದಿದ್ದಾನೆ. ಚಿಕ್ಕಮಗಳೂರು ತಾಲೂಕಿನ ಭದ್ರಾ ಅಭಯಾರಣ್ಯ ಪ್ರದೇಶದ ಮುತ್ತೋಡಿ ವಲಯದಲ್ಲಿ ಬುಧವಾರ ಸಂಜೆ ವರ್ಷದ ಮೊದಲ ಮಳೆಯಾಗಿದ್ದು, ಜನ ಸಂತಸಗೊಂಡಿದ್ದಾರೆ.
ಇನ್ನೂ ಮಾರ್ಚ್ 20 ರ ಬಳಿಕ ರಾಜ್ಯದ ಹಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕೊಡಗು ಮತ್ತು ದಕ್ಷಿಣ ಕನ್ನಡದ ಘಟ್ಟಗಳ ಭಾಗದಲ್ಲಿ ಲಘು ಮಳೆಯನ್ನು ನಿರೀಕ್ಷೆ ಮಾಡಲಾಗಿದೆ.
ಈ ಬಾರಿ ಮಳೆ ಇಲ್ಲದೇ ಬರಗಾಲದಿಂದಾಗಿ ಕುಡಿಯುವ ನೀರು, ಬೆಳೆಗಳಿಗೆ ನೀರುಣಿಸಲು ಜನ, ರೈತರು ಸಂಕಷ್ಟದಲ್ಲಿದ್ದು, ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಸಂಭ್ರಮಿಸಿದ್ದಾರೆ. ಮೊದಲ ಮಳೆ ಹನಿಗಳು ಬೀಳುತ್ತಿದ್ದಂತೆ ಜನರು ಮನೆಯಿಂದ ಹೊರಗೆ ಬಂದು ಮಳೆಯಲ್ಲಿ ನೆನೆದು ಸಂತಸ ವ್ಯಕ್ತಪಡಿಸಿದ್ದಾರೆ. ಮಳೆ ಹನಿ ಬಿದ್ದಾಗ ಮಣ್ಣಿನ ವಾಸನೆಯಿಂದ ಸಂತಸಪಟ್ಟಿದ್ದಾರೆ.
ಇನ್ನು ಕೊಡಗು ಜಿಲ್ಲೆ ಹಲವೆಡೆ ಬುಧವಾರ ಸಾಧಾರಣ ಮಳೆಯಾಗಿದೆ. ಮೂರ್ನಾಡು, ಕಾಕೋಟುಪರಂಬು ಸೇರಿದಂತೆ ಜಿಲ್ಲೆಯ ಹಲವು ಕಡೆ ತುಂತುರು ಮಳೆಯಾಗಿದೆ. ಮಡಿಕೇರಿ ಸೇರಿ ಹಲವಡೆ ದಟ್ಟ ಮೋಡ ಕವಿದ ವಾತಾವರಣ ಕಂಡು ಬಂದಿದೆ.



