ದಾವಣಗೆರೆ: ಅರಣ್ಯ ಪ್ರದೇಶದಲ್ಲಿ ಕೋಳಿ, ಕುರಿ ಮಾಂಸದ ಒಳಗೆ ನಾಡಬಾಂಬ್ ಇಟ್ಟು ಸ್ಫೋಟಗಿಳಿಸಿ, ಕಾಡುಪ್ರಾಣಿ ಬೇಟೆಯಾಡುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ನ್ಯಾಮತಿ ತಾಲೂಕಿನ ದೊಡ್ಡೆತ್ತಿನಹಳ್ಳಿ ಗ್ರಾಮದ ನಿವಾಸಿ ಬಸವರಾಜಪ್ಪ (42) ಬಂಧಿತ ಆರೋಪಿ, ಇನ್ನೊಬ್ಬ ಆರೋಪಿ ಅಪ್ಪು (38) ಪರಾರಿಯಾಗಿದ್ದಾನೆ. ದಾಳಿ ವೇಳೆ ಆರೋಪಿ ಬಳಿ ಇದ್ದ 63 ಜೀವಂತ ನಾಡಬಾಂಬ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ನ್ಯಾಮತಿ ವ್ಯಾಪ್ತಿಯ ಹರಮಘಟ್ಟ ಅರಣ್ಯ ಪ್ರದೇಶದಲ್ಲಿ ನಾಡಬಾಂಬ್ ಕೋಳಿ ಹಾಗೂ ಕುರಿ ಮಾಂಸದಲ್ಲಿಟ್ಟು ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಪೊಲೀಸರು ಆರೋಪಿ ಬಸವರಾಜಪ್ಪನನ್ನು ಜೆಎಂಎಫ್ಸಿ ಕೋರ್ಟ್ಗೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ವಶಪಡಿಸಿಕೊಂಡ ಜೀವಂತ ನಾಡ ಬಾಂಬ್ಗಳನ್ನು ನಿಷ್ಕ್ರಿಯ ಗೊಳಿಸಲು ಚಿತ್ರದುರ್ಗದ ಸ್ಪೋಟಕ ವಸ್ತು ಸಂಗ್ರಹಾಲಯಕ್ಕೆ ರವಾನೆ ಮಾಡಲಾಗಿದೆ.



