ದಾವಣಗೆರೆ: ತನ್ನ ಜೊತೆ ಮಾತನಾಡಲಿಲ್ಲ ಎನ್ನುವ ಕಾರಣಕ್ಕೆ ತರಕಾರಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯನ್ನು ಕೊಂದ ಅಪರಾಧಿಗೆ ದಾವಣಗೆರೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ದಂಡ ವಿಧಿಸಿದೆ.
ಹರಿಹರದ ಕುರುಬರ ಬೀದಿಯ ನಿವಾಸಿ ತರಕಾರಿ ವ್ಯಾಪಾರಿ ರೇಖಾ ಕೊಲೆಯಾದ ಮಹಿಳೆ. ಅದೇ ಬೀದಿಯ ನಿವಾಸಿ ಚೇತನ್ ಎಂಬ ಯುವಕ ಕೊಲೆ ಮಾಡಿದ್ದನು. ರೇಖಾ, ಚೇತನ್ ಜೊತೆ ಮಾತನಾಡುತ್ತಿರುವುದನ್ನು ನೀಡಿದ್ದ ಪತಿ ನಾಗರಾಜ , ಪತ್ನಿಗೆ ಎಚ್ಚರಿಕೆ ನೀಡಿದ್ದಲ್ಲದೆ ಮಹಿಳೆ ತಾಯಿ ಹಾಗೂ ಅಣ್ಣ ಕರೆಸಿ ಬುದ್ಧಿಮಾತು ಹೇಳಿದ್ದರು. ಇದರಿಂದ ರೇಖಾ, ಯುವಕ ಚೇತನ್ ಜೊತೆ ಮಾತು ಬಿಟ್ಟಿದ್ದರು. ಇದರಿಂದ ಯುವಕ ಕೋಪಗೊಂಡಿದ್ದನು.
ರೇಖಾ 2020ರ ಡಿಸೆಂಬರ್ 29ರಂದು ಹರಿಹರದ ಮಹೇಜನಹಳ್ಳಿ ಬಳಿ ತರಕಾರಿಯನ್ನು ಮನೆಗೆ ಕೊಂಡೊಯ್ಯಲು ಮಗನೊಂದಿಗೆ ಆಟೋಗಾಗಿ ಮಗನ ಜೊತೆಯಲ್ಲಿ ನಿಂತಿದ್ದಾಗ ಚೇತನ್, ರೇಖಾ ಅವರನ್ನು ಚಾಕುವಿನಿಂದ ಕೊಲೆ ಮಾಡಿದ್ದ. ಅಂದಿನ ಹರಿಹರ ವೃತ್ತದ ಸಿಪಿಐ ಸತೀಶ್ಕುಮಾರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಾದ-ವಿವಾದವನ್ನು ಆಲಿಸಿದ ನ್ಯಾಯಾಧೀಶರಾದ ಜೆ.ವಿ. ವಿಜಯಾನಂದ ಅವರು ಶಿಕ್ಷೆ ಪ್ರಕಟಿಸಿದರು. ವಕೀಲ ಕೆ.ಎಸ್. ಸತೀಶ್ ವಾದ ಮಂಡಿಸಿದ್ದರು.



