ದಾವಣಗೆರೆ: ಜಿಲ್ಲೆಯ ರೈತರ ಜೀವನಾಡಿ ಭದ್ರಾ ಜಲಾಶಯದಿಂದ ಬೇಸಿಗೆ ಹಂಗಾಮಿಗೆ ನೀರು ಹರಿಸುವ ಬಗ್ಗೆ ಜ.5ರಂದು ಮಹತ್ವ ಸಭೆಯನ್ನು ಕರೆಯಾಗಿದೆ. ಈ ಸಭೆಯಲ್ಲಿ ಭತ್ತದ ಬೆಳೆ ಸೇರಿ ತೋಟಗಾರಿಕೆ ಬೆಳೆಗಳಿಗೆ ಎಷ್ಟು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ ಎಂಬ ಬಗ್ಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತಿದೆ.
ಭದ್ರಾ ಕಾಡಾ ಅಧ್ಯಕ್ಷರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರ ಅಧ್ಯಕ್ಷತೆಯಲ್ಲಿ ಜನವರಿ 5ಕ್ಕೆ ಶಿವಮೊಗ್ಗ ತಾಲೂಕಿನ ಮಲವಗೊಪ್ಪದಲ್ಲಿ ನೀರಾವರಿ ಸಲಹಾ ಸಮಿತಿಯ ಸಭೆ ನಡೆಯಲಿದೆ. ರೈತರಿಗೆ ಈ ಸಭೆ ಮಹತ್ವದ್ದಾಗಿದೆ. ಕಳೆದ ವರ್ಷಕ್ಕಿಂದ ಈ ವರ್ಷ 30 ಅಡಿ ನೀರು ಕಡಿಮೆ ಇದೆ.
ಭದ್ರಾ ಜಲಾಶಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ನೀರು ಇಲ್ಲದಿದ್ದರೂ, ತೋಟಗಾರಿಕೆ ಬೆಳೆಗಳಿಗೆ, ಕೆರೆ- ಕಟ್ಟೆ ತುಂಬಿಸಲು ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ನೀರು ಬಿಡಲೇಬೇಕಿದೆ. ಈ ಬಗ್ಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದು, ಜ. 5ರಂದು ನಡೆಯುವ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ.
ಪ್ರಸ್ತುತ 2024ರ ಜನವರಿ ತಿಂಗಳಿನಲ್ಲಿ 151.4 ಅಡಿ ನೀರು ಸಂಗ್ರಹವಿದೆ.ಒಳಹರಿವು 201 ಕ್ಯೂಸೆಕ್ ಇದೆ. ಇನ್ನೂ 2023ರ ಜನವರಿ ತಿಂಗಳಿನಲ್ಲಿ ಜಲಾಶಯದ ನೀರಿನ ಮಟ್ಟ 182.4 ಅಡಿ ಇತ್ತು. ಪ್ರತಿ ವರ್ಷದ ಬೇಸಿಗೆ ಹಂಗಾಮಿನಲ್ಲಿ ಜಲಾಶಯದಿಂದ 2.42 ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಉಣಿಸಲಾಗುತ್ತಿತ್ತು. ಕಳೆದ ವರ್ಷ ಮಳೆಯ ಕೊರತೆಯಿಂದ 30 ಅಡಿ ನೀರು ಕಡಿಮೆಯಾಗಿದೆ. ಈ ಸಲ ಭತ್ತ ಬೆಳೆಗೆ ನೀರು ಹರಿಸುತ್ತಾರೋ ಇಲ್ಲವೋ ಎಂಬ ಅನುಮಾನ ಮೂಡಿದೆ. ಜ. 5ರ ಸಭೆ ದಾವಣಗೆರೆ ಜಿಲ್ಲೆಗಳ ರೈತರಿಗೆ ಮಹತ್ವದ್ದಾಗಿದೆ. ಜವವರಿಯಿಂದ ಮೇ ತಿಂಗಳವರೆಗೆ ಐದು ತಿಂಗಳ ಕಾಲ ತಿಂಗಳಿಗೆ 10 ದಿನಗಳಂತೆ ಕಾಲುವೆಗೆ ನೀರು ಹರಿಸಲು ಯೋಜನೆ ರೂಪಿಸಲಾಗುತ್ತಿದೆ ಎನ್ನಲಾಗುತ್ತಿದೆ.
ಭದ್ರಾ ಜಲಾಶಯದ ನೀರಿನ ಸಂಗ್ರಹ ಒಟ್ಟು ಸಾಮರ್ಥ್ಯ 71.55 ಟಿಎಂಸಿ. ಜಲಾಶಯದಲ್ಲಿ ಸದ್ಯ 26.90 ಟಿಎಂಸಿ ಅಡಿ ನೀರು ಸಂಗ್ರಹವಿದ್ದು, ಈ ಪೈಕಿ ಡೆಡ್ ಸ್ಟೋರೇಜ್ 8.50 ಟಿಎಂಸಿ ಹೊರತುಪಡಿಸಿದರೆ ಉಳಿದ ನೀರು ಬಳಕೆಗೆ ಸಿಗಲಿದೆ. ಲಭ್ಯವಿರುವಂಥ ನೀರಿನಲ್ಲಿ 6.5 ಟಿಎಂಸಿ ಅಡಿ ಕುಡಿಯುವ ನೀರಿಗೆ ಕಡ್ಡಾಯವಾಗಿ ಉಪಯೋಗಿಸಬೇಕಿದೆ. ಉಳಿದ 12 ಟಿಎಂಸಿ ಅಡಿಯಷ್ಟು ನೀರನ್ನು ಕೃಷಿ ಬಳಕೆೆ ಲಭ್ಯವಾಗಲಿದೆ.



