ದಾವಣಗೆರೆ: ಕಸ ನಿರ್ವಹಣೆಯಲ್ಲಿ ವಿಫಲರಾದ ಸಾರ್ವಜನಿಕರಿಗೆ ಮಹಾನಗರ ಪಾಲಿಕೆ 1.22 ಲಕ್ಷ ದಂಡ ವಿಧಿಸಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ನಿರ್ವಹಣೆ ವ್ಯವಸ್ಥೆಯನ್ನು ಉತ್ತಮಗೊಳಿಸುವ ಸಲುವಾಗಿ ಡಿ.1 ರಿಂದ 12ರ ವರೆಗೆ ಆರೋಗ್ಯ ನಿರೀಕ್ಷಕರುಗಳು ತಮ್ಮ ವಾರ್ಡ್ಗಳಿಗೆ ಭೇಟಿ ನೀಡಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವಿಕೆ, ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ಗಳ ಬಳಕೆ, ತ್ಯಾಜ್ಯ ವಿಂಗಡಣೆ ಮಾಡದೇ ಇರುವುದು ಹಾಗೂ ಬೀದಿ ವ್ಯಾಪಾರಸ್ಥರು ಅಗತ್ಯ ಕಸದಬುಟ್ಟಿಗೆ ತ್ಯಾಜ್ಯ ವಿಂಗಡಿಸಲು ವಿಫಲರಾದ 350 ಉಲ್ಲಂಘನೆದಾರರುಗಳಿಂದ ರೂ.1,22,447 ದಂಡ ವಸೂಲಿ ಮಾಡಲಾಗಿದೆ.
ನಿಯಮ ಉಲ್ಲಂಘಿಸಿದ ಸಾರ್ವಜನಿಕರಿಗೆ ಸ್ಥಳದಲ್ಲಿಯೇ ಪಿ.ಒ.ಎಸ್ ಮಶೀನ್ ಗಳ ಮೂಲಕ ದಂಡ ವಿಧಿಸಲಾಯಿತು. ದಂಡ ವಸೂಲಿಗೆ ಅನುಕೂಲವಾಗುವಂತೆ ಯುಪಿಐ, ಡೆಬಿಟ್ ಕಾರ್ಡ್, ನಗದುಗಳ ಮೂಲಕ ಹಣ ಪಾವತಿಸುವ ಸೂಕ್ತ ವ್ಯವಸ್ಥೆಯನ್ನು ಕೈಗೊಳ್ಳಲಾಗಿತ್ತು. ನಗರದ ಎಲ್ಲಾ ಸಾರ್ವಜನಿಕರು, ಉದ್ದಿಮೆದಾರರು ತಮ್ಮಲ್ಲಿ ಉತ್ಪಾದಿಸಿದ ತ್ಯಾಜ್ಯವನ್ನು ಖಾಲಿ ನಿವೇಶನ, ಚರಂಡಿ, ರಸ್ತೆ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯದೆ ಮೂಲದಲ್ಲಿಯೇ ಹಸಿ, ಒಣ ಹಾಗೂ ಸ್ಥಾನಿಟರಿ ತ್ಯಾಜ್ಯಗಳಾಗಿ ವಿಂಗಡಿಸಿ ಮಹಾನಗರ ಪಾಲಿಕೆಯ ತ್ಯಾಜ್ಯ ವಿಂಗಡಣಾ ವಾಹನಗಳಿಗೆ ನೀಡುವಂತೆ ಹಾಗೂ ಏಕಬಳಕೆ ಪ್ಲಾಸ್ಟಿಕ್ಗಳ ಬಳಕೆಯನ್ನು ನಿರಾಕರಿಸುವ ಮೂಲಕ ನಗರ ಸ್ವಚ್ಛತೆಯಲ್ಲಿ ಮಹಾನಗರ ಪಾಲಿಕೆಯೊಂದಿಗೆ ಕೈಜೋಡಿಸಬೇಕು ಎಂದು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.



