ದಾವಣಗೆರೆ: ಕಬ್ಬು ತುಂಬಿಕೊಂಡು ಸಾಗುತ್ತಿದ್ದ ಟ್ರ್ಯಾಕ್ಟರ್ ವೊಂದು ಹೆಬ್ಬಾಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿ ಹೊಡೆದಿದೆ. ಕಬ್ಬು ತುಂಬಿದ ಟ್ರ್ಯಾಕ್ಟರ್ ಭರಮಸಾಗರದ ಕಡೆಯಿಂದ ದಾವಣಗೆರೆ ಕಡೆಗೆ ಹೊರಟಿತ್ತು. ಹೆಬ್ಬಾಳು ಸಮೀಪ ಬರುತ್ತಿದ್ದಂತೆ ಒಂದು ಕಡೆ ವಾಲಿದ ಕಬ್ಬಿನ ಟ್ರ್ಯಾಕ್ಟರ್, ಏಕಾಏಕಿ ಪಲ್ಟಿಯಾಗಿದೆ.
ಸದ್ಯ ಚಾಲಕ ಪ್ರಾಣಾಪಾಯದಿಂದ ಪರಾಗಿದ್ದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಲೋಡ್ ಹೆಚ್ಚಾಗಿದ್ದ ಕಾರಣ ಟ್ರ್ಯಾಕ್ಟರ್ ಪಲ್ಟಿ ಹೊಡೆಯಲು ಮುಖ್ಯ ಕಾರಣ ಎನ್ನಲಾಗಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೆಸಿಬಿ ಯಂತ್ರದ ಮೂಲಕ ಟ್ರ್ಯಾಕ್ಟರ್ ಮೇಲಕ್ಕೆ ಎತ್ತಲಾಗಿದ್ದು, ಕಬ್ಬನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.



