ದಾವಣಗೆರೆ: ಈ ಹಿಂದೆ ಕಾಂಗ್ರೆಸ್- ಜೆಡಿಎಸ್ ಸರ್ಕಾರ ಬೀಳಿಸಿದ ಬಿಜೆಪಿ ಒಂದು ಟೀಂ, ಈಗ ಕಾಂಗ್ರೆಸ್ ಶಾಸಕರ ಖರೀದಿಗೆ ಸಕ್ರಿಯವಾಗಿದ್ದು, ಶಾಸಕರಿಗೆ 50 ಕೋಟಿ ಆಫರ್ ನೀಡುತ್ತಿದ್ದಾರೆ. ನಮ್ಮ ಬಳಿ ಎಲ್ಲಾ ದಾಖಲೆಗಳಿವೆ. ಅತೀ ಶೀಘ್ರದಲ್ಲಿಯೇ ಎಲ್ಲಾ ಮಾಹಿತಿ ಬಹಿರಂಗಪಡಿಸಲಾಗುವುದು ಎಂದು ಮಂಡ್ಯ ಶಾಸಕ ರವಿಕುಮಾರ್ ಗಣಿಗ ದಾವಣಗೆಯಲ್ಲಿ ಸ್ಟೋಟಕ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ದಿಕ್ಕಿನಲ್ಲೂ ಆಪರೇಷನ್ ಕಮಲ ನಡೆಯುತ್ತಿದೆ. 50 ಶಾಸಕರ ಸಂಪರ್ಕ ಮಾಡಿದ್ದಾರೆ. ಈ ಹಿಂದೆ ನಮ್ಮ ಸರ್ಕಾರ ಕೆಡವಿದ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪರ ಆಪ್ತ ಸಹಾಯಕ ಸಂತೋಷ್ ಅವರಿಂದ ಈ ಕೆಲಸ ನಡೆಯುತ್ತಿದೆ ಎಂದು ನೇರ ಆರೋಪ ಮಾಡಿದರು.
ಕಾಂಗ್ರೆಸ್ ಶಾಸಕರಿಗೆ 50 ಕೋಟಿ ನೀಡುವುದಾಗಿ ಬಿಜೆಪಿಯವರು ಆಮೀಷವೊಡ್ಡುತ್ತಿದ್ದಾರೆ. ಮೈಸೂರು ಮತ್ತು ಬೆಳಗಾವಿ ಭಾಗದ ಬಿಜೆಪಿ ನಾಯಕರು ಈ ಆಮೀಷವಿಡ್ಡುತ್ತಿದ್ದಾರೆ. ನಮ್ಮ ಶಾಸಕ ಮಿತ್ರರೊಬ್ಬ ಸಂತೋಷ ಭೇಟಿ ಆಗಿದ್ದಾನೆ.ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ, ಬೆಳಗ್ಗೆ ಎದ್ದ ತಕ್ಷಣ ಕಾಂಗ್ರೆಸ್ ಮನೆ ಬಾಗಿಲಿಗೆ ಹುಡುಕಿ ಬರುವುದು ಕಾಯಕವಾಗಿಬಿಟ್ಟಿದೆ. ನಮ್ಮ ಶಾಸಕರ ಜೊತೆ ಮಾತನಾಡಿದ ಆಡಿಯೋ ಮತ್ತು ವಿಡಿಯೋ ಇದೆ. ಸಂದರ್ಭ ಬಂದಾಗ ಅದನ್ನು ಬಿಡುಗಡೆ ಮಾಡುತ್ತೇವೆ ಎಂದರು.
ಸ್ಪೆಷಲ್ ಫ್ಲೈಟ್ ಮಾಡಿ, ಅಮಿತ್ ಶಾ ಭೇಟಿ ಮಾಡಿಸುತ್ತೇವೆ ಎಂದು ಆಸೆ ಹುಟ್ಟಿಸುವ ಕೆಲಸ ಮಾಡಲಾಗುತ್ತಿದೆ. 49 ಶಾಸಕರು ನಮ್ಮ ಕಡೆ ಇದ್ದಾರೆ. ನೀವು 50ನೇ ಶಾಸಕ ಅಂತಾ ಹೇಳುತ್ತಿದ್ದಾರೆ. ಈ ವಿಚಾರ ಸಿಎಂ ಹಾಗೂ ಡಿಸಿಎಂ ಗಮನಕ್ಕೆ ತಂದಿದ್ದೇವೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸೂಕ್ತ ಸಂದರ್ಭದಲ್ಲಿ ಸೂಕ್ತ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ.
ಎರಡೂವರೆ ವರ್ಷ ಡಿ.ಕೆ ಶಿವಕುಮಾರ್ ಸಿಎಂ; ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಅವರು ಎರಡೂವರೆ ವರ್ಷದ ಬಳಿಕ ರಾಜ್ಯದ ಮುಖ್ಯಮಂತ್ರಿಯಾಗುವುದು ಖಚಿತ. ಪಕ್ಷಕ್ಕಾಗಿ ಡಿ. ಕೆ. ಶಿವಕುಮಾರ್ ದುಡಿದಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಘಟಿಸಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಹೈಕಮಾಂಡ್ ನಲ್ಲಿ ಏನು ತೀರ್ಮಾನ ಆಗಿದೆ ಎಂಬುದು ಗೊತ್ತಿಲ್ಲ ಎಂದು ತಿಳಿಸಿದರು.