ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಮಾದನಭಾವಿ ಗ್ರಾಮದ ಗವಿಸಿದ್ದೇಶ್ವರ ಸೇವಾ ಸಮಿತಿ ಟ್ರಸ್ಟ್, 18 ಹಳ್ಳಿ ಕಟ್ಟೆಮನೆ ದೊಡ್ಡಕಲ್ಲುಕಟ್ಟೆ ಹಾಗೂ ವಿವಿಧ ಸಮಿತಿಗಳು ಮತ್ತು ರೈತರಿಂದಲೇ ನಡೆಯುತ್ತಿರುವ ರಾಜ್ಯಮಟ್ಟದ ದಸರಾ ಬನ್ನಿ ಕೃಷಿ ಮೇಳ ಇಂದಿನಿದ ಮೂರು ದಿನ ನಡೆಯಲಿದೆ. ಪ್ರಕೃತಿ ವೈಫಲ್ಯದ ಸಮನ್ವಯ ಸಾಂಗತ್ಯ ಎಂಬ ಶೀರ್ಷಿಕೆ ಅಡಿಯಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ.
ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಶಾಸಕ ಡಿ.ಜಿ.ಶಾಂತನಗೌಡ ಅವರು ಮೇಳವನ್ನು ಉದ್ಘಾಟಿಸುವರು. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಅಧ್ಯಕ್ಷತೆ ವಹಿಸುವರು. ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಆರ್.ಸಿ.ಜಗದೀಶ, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಮುಖಂಡರಾದ ಎಚ್.ಬಿ.ಸಿದ್ದಪ್ಪ, ಎಚ್.ಎ.ಉಮಾಪತಿ, ಎಚ್.ಬಿ.ಶಿವಯೋಗಿ, ಪಾಲಾಕ್ಷಪ್ಪ, ಕೆ.ಸಿ.ಬಸಪ್ಪ, ಡಿ.ಜಿ.ವಿಶ್ವನಾಥ, ನುಚ್ಚಿನ ವಾಗೀಶ, ಜಿ.ಬಿ.ವಿನಯ್ಕುಮಾರ್, ಜಯಪ್ಪ ಬಿದರಗಡ್ಡೆ ಪಾಲ್ಗೊಳ್ಳುವರು.
ಮಧ್ಯಾಹ್ನ 2ಕ್ಕೆ ಡಾ.ಡಿ.ಬಿ.ಗಂಗಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ರೈತಗೋಷ್ಠಿಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಶಾಸಕ ಪ್ರೀತಂಗೌಡ, ಎಂಎಲ್ಸಿ ಡಿ.ಎಸ್.ಅರುಣ್, ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ ಉಪಸ್ಥಿತರಿರುವರು.
ಬೀಜಗಳ ಸಂರಕ್ಷಣೆ ಮತ್ತು ಬೀಜೋಪಚಾರ ಕುರಿತು ಇರುವಕ್ಕಿ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯದ ಎಚ್.ಸಿ.ದಿನೇಶ, ಸಿದ್ಧಾರೂಢ ಸಿಂಗಾಡಿ, ರೇಷ್ಮೆ ಕೃಷಿಯಲ್ಲಿ ಆಧುನಿಕ ಸಂರಕ್ಷಣೆ ಕುರಿತು ತರಳಬಾಳು ಕೃಷಿ ವಿಜ್ಞಾ ಕೇಂದ್ರದ ಮಲ್ಲಿಕಾರ್ಜುನ, ತರಕಾರಿ ಸಸಿಗಳ ಸಂರಕ್ಷಣೆ ಹಾಗೂ ನರ್ಸರಿ ವ್ಯವಸ್ಥೆ ಬಗ್ಗೆ ರವಿಶಂಕರ ಪಾಟೀಲ್ ಹಾಗೂ ತರಕಾರಿ ಬೆಳೆಗಳಲ್ಲಿ ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ಕುರಿತು ಎನ್.ಎಲ್.ನವೀನ್ ಉಪನ್ಯಾಸ ನೀಡುವರು.



