ದಾವಣಗೆರೆ: ಭದ್ರಾ ಡ್ಯಾಂ ಬಲದಂಡೆ ನಾಲೆಗೆ ನಿರಂತರ 100 ದಿನ ನೀರು ಹರಿಸುವಂತೆ ನಿನ್ನೆ ಡಿಸಿಎಂ ಶಿವಕುಮಾರ್ ಭೇಟಿ ಮಾಡಿದ ಲೋಕಸಭಾ ಸದಸ್ಯ ಜಿ. ಎಂ. ಸಿದ್ದೇಶ್ವರ ನೇತೃತ್ವದ ನಿಯೋಗವು, ಇಂದು (ಅ.13) ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಭದ್ರಾ ನೀರಾವರಿ ಸಲಹಾ ಸಮಿತಿ (ICC) ಅಧ್ಯಕ್ಷ ಮಧುಬಂಗಾರಪ್ಪ ಅವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ದಾವಣಗೆರೆ ಜಿಲ್ಲೆ ರೈತರ ಜೀವನಾಡಿ ಭದ್ರಾ ಜಲಾಶಯವಾಗಿದ್ದು, ಈ ಬಾರಿಯ ತೀವ್ರ ಮಳೆ ಕೊರತೆ ಹಿನ್ನೆಲೆ ಪೂರ್ಣ ಭರ್ತಿಯಾಗಿಲ್ಲ. ನಿರಂತರ 100 ದಿನ ನೀರು ಹರಿಸುವ ಭರವಸೆಯನ್ನು ನೀರಾವರಿ ಇಲಾಖೆ ನೀಡಿದ್ದರಿಂದ ರೈತರು ಭತ್ತ ನಾಟಿ ಮಾಡಿದ್ದರು. ಇದೀಗ ಇಲಾಖೆ ಆಫ್ ಅಂಡ್ ಆನ್ ಪದ್ಧತಿ ಮೊರೆ ಹೋಗಿದೆ. ಈ ಪದ್ಧತಿ ರದ್ದು ಮಾಡಿ ನಿರಂತರವಾಗಿ ಬಲದಂಡೆ ನಾಲೆಗೆ ನಿರಂತರ ನೀರು ಹರಿಸಬೇಕೆಂದು ದಾವಣಗೆರೆ ಸಂಸದ, ಹರಿಹರ ಶಾಸಕರು ಹಾಗೂ ಅಚ್ಚುಕಟ್ಟು ರೈತರ ನೇತೃತ್ವದ ನಿಯೋಗ ಮನವಿ ಸಲ್ಲಿಸಿತ್ತು.
ನಿಮ್ಮ ಅಧ್ಯಕ್ಷತೆಯ ಸಮಿತಿ ಆನ್ ಅಂಡ್ ಆಫ್ ಪದ್ಧತಿ ಜಾರಿ ಮಾಡಿದೆ. ನಿರಂತರವಾಗಿ ನೀರು ಹರಿಸುವ ಪದ್ಧತಿ ರದ್ದುಗೊಳಿಸಿದೆ. ದಾವಣಗೆರೆ ಜಿಲ್ಲೆಯಲ್ಲಿ ಬೆಳೆದಿರುವ ಭತ್ತದ ಬೆಳೆ ನಾಶವಾಗುತ್ತದೆ. ಆದ್ದರಿಂದ ನಿರಂತರ ನೀರು ಹರಿಸುವ ಪದ್ಧತಿ ಜಾರಿ ಮಾಡಬೇಕು. ಅಕ್ಟೋಬರ್ 15 ರಂದು ನೀರು ನಿಲುಗಡೆ ಮಾಡಬಾರದು ಎಂದು ಆಗ್ರಹಿಸಲಾಯಿತು.
ನಿಯೋಗದಲ್ಲಿ ವಿಧಾನ ಪರಿಷತ್ ಸದಸ್ಯ ಕೆ. ಎಸ್. ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ಎಂ. ವೀರೇಶ್ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ. ಎಸ್. ಜಗದೀಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ರೈತ ಮುಖಂಡರಾದ ಕೊಳೇನಹಳ್ಳಿ ಬಿ. ಎಂ. ಸತೀಶ್, ಧನಂಜಯ ಕಡ್ಲೆಬಾಳ್, ಶಾಗಲೆ ದೇವೇಂದ್ರಪ್ಪ, ಬಾತಿ ವಿರೇಶ್ ದೊಗ್ಗಳ್ಳಿ, ಬಿ ಕೆ ಶಿವಕುಮಾರ್, ವಕೀಲ ಕೆ. ಎನ್. ಹನುಮಂತಪ್ಪ, ಅಥಿತ್ ಅಂಬರಕರ್, ಕೊಟ್ರೇಶ್ ಗೌಡ ಮತ್ತಿತರರು ಇದ್ದರು.



