ಬೆಂಗಳೂರು: ನಿಮ್ಮ ಫೋನ್ ಗೂ ಬೀಪ್ ಶಬ್ದದೊಂದಿಗೆ ‘ತುರ್ತು ಸಂದರ್ಭದ ಎಚ್ಚರಿಕೆ’ಯ ಸಂದೇಶವೊಂದು ಬಂದಿದೆಯಾ..? ಇಂದು ಬೆಳಿಗ್ಗೆ 11.45ರ ಸುಮಾರಿಗೆ ಈ ಸಂದೇಶ ರಾಜ್ಯದ ಎಲ್ಲ ಮೊಬೈಲ್ ಬಳಕೆದಾರರಿಗೆ ಬಂದಿದೆ. ಇದು ಹವಾಮಾನ ಎಚ್ಚರಿಕೆ ಪ್ರಾಯೋಗಿಕ ಮುನ್ಸೂಚನೆಯಾಗಿದ್ದು,ಜನರು ಆತಂಕಪಡುವ ಅಗತ್ಯವಿಲ್ಲ. ಇದೊಂದು ಪರೀಕ್ಷಾರ್ಥ ಪ್ರಯೋಗ ಎಂದು ಸರ್ಕಾರ ಹೇಳಿದೆ.
ದೇಶದಲ್ಲಿ ನಡೆಯುವ ಸುನಾಮಿ, ಭೂಕಂಪ, ಪ್ರವಾಹ, ಅತಿವೃಷ್ಟಿ.. ಹೀಗೆ ಹವಾಮಾನ ಎಚ್ಚರಿಕೆ ಮುನ್ಸೂಚನೆಗಳನ್ನು ತಕ್ಷಣ ಜನರಿಗೆ ತಲುಪಿಸಿ, ಎಚ್ಚರಿಸುವ ‘ಬ್ರಾಡ್ಕಾಸ್ಟ್ ತುರ್ತು ಸಂದೇಶ’ ವ್ಯವಸ್ಥೆ ಸಿದ್ಧವಾಗಿದ್ದು, ಕರ್ನಾಟಕದಲ್ಲಿ ಅ.12ರಿಂದ ಅದರ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿದೆ.
ದೂರಸಂಪರ್ಕ ಇಲಾಖೆಯ ಸೆಲ್ ಬ್ರಾಡ್ಕಾಸ್ಟ್ ಸಿಸ್ಟಂ ಮೂಲಕ ಈ ಸಂದೇಶ ಬಂದ ಕೆಲವೇ ಕ್ಷಣಗಳಲ್ಲಿ ಇದರ ಸ್ಕ್ರೀನ್ಶಾಟ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.ದೇಶದ ಜನರ ಸುರಕ್ಷತೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಕ ದೇಶವ್ಯಾಪಿ ತುರ್ತು ಸಂದರ್ಭದಲ್ಲಿ ಎಚ್ಚರಿಕೆಯ ಸಂದೇಶ ನೀಡುವ ಪ್ರಯೋಗ ನಡೆಸಿರುವುದಾಗಿ ಇಲಾಖೆ ಹೇಳಿದೆ. ಇಂಥ ಪ್ರಯೋಗಗಳನ್ನು ಹಲವು ಪ್ರದೇಶಗಳಲ್ಲಿ ಹಾಗೂ ಬೇರೆ ಬೇರೆ ಸಮಯಗಳಲ್ಲಿ ನಡೆಸಲಾಗುವುದು. ಆ ಮೂಲಕ ಸಂದೇಶ ಕಳುಹಿಸುವ ವ್ಯವಸ್ಥೆ ಮತ್ತು ಅದರ ಪರಿಣಾಮಗಳ ಕುರಿತು ಪರೀಕ್ಷೆಗಳನ್ನು ನಡೆಸಲಾಗುವುದು ಎಂದಿದೆ.
ಪ್ಯಾನ್ ಇಂಡಿಯಾ ತುರ್ತು ಎಚ್ಚರಿಕೆ ಸಂದೇಶ ಅಕ್ಷರ ರೂಪದಲ್ಲಿ ಹಾಗೂ ಧ್ವನಿ ರೂಪದಲ್ಲೂ ಪ್ರಸಾರವಾಯಿತು. ಭೂಕಂಪ, ಪ್ರವಾಹದಂತ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಈ ಮಾದರಿಯ ಸಂದೇಶವನ್ನು ಏಕಕಾಲಕ್ಕೆ ದೇಶವ್ಯಾಪಿ ಮೊಬೈಲ್ ಬಳಕೆದಾರರಿಗೆ ಕಳುಹಿಸುವ ವ್ಯವಸ್ಥೆ ಇದಾಗಿದೆ ಎಂದು ಇಲಾಖೆ ತಿಳಿಸಿದೆ.ದೊಡ್ಡ ಬೀಪ್ ಶಬ್ದದೊಂದಿಗೆ ಬಂದ ಸಂದೇಶದ ಕುರಿತು ಹಲವರು ಆತಂಕ ವ್ಯಕ್ತಪಡಿಸಿ ಸ್ನೇಹಿತರಿಗೆ, ಸಂಬಂಧಿಕರಲ್ಲಿ ವಿಚಾರಿಸಿದ್ದಾರೆ.



