ದಾವಣಗೆರೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನ ಡಿ.23 ಮತ್ತು 24 ರಂದು ದಾವಣಗೆರೆಯ ಎಂ.ಬಿ.ಎ. ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಹೇಳಿದ್ದಾರೆ.
ದಾವಣಗೆರೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಕರ್ನಾಟಕ ಮಾತ್ರವಲ್ಲ, ಜಗತ್ತಿನ ವಿವಿಧ ಕಡೆ ಇರುವ ಲಿಂಗಾಯತ ಸಮುದಾಯವನ್ನು ಒಂದು ಕಡೆ ಸೇರಿಸಿ ಸಮುದಾಯ ನಡೆದು ಬಂದ ಹಾದಿ, ಸಮುದಾಯದ ಮುಂದಿರುವ ಸವಾಲು ಸೇರಿ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ನಿರ್ಣಯ, ಗೊತ್ತುವಳಿಗಳ ಮಂಡಿಸಿ, ಅಂಗೀಕರಿಸಿ ಸರ್ಕಾರದ ಮುಂದಿಡಲಾಗುವುದು. ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಲಿಂಗಾಯತ ಸಮುದಾಯ ಸೇರ್ಪಡೆ ಹಲವಾರು ವಿಷಯಗಳ ಬಗ್ಗೆ ಮಹಾಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು ಎಂದರು..
ಮಹಾ ಅಧಿವೇಶನದಲ್ಲಿ ಸುತ್ತೂರು, ತುಮಕೂರು ಶ್ರೀಗಳು ಒಳಗೊಂಡಂತೆ ಗುರು- ವಿರಕ್ತರು, ಸ್ವಾಮೀಜಿಯವರು, ಜನಪ್ರತಿನಿಧಿಗಳು, ಸಮಾಜದ ಮುಖಂಡರು, ಗಣ್ಯರು, ವಿವಿಧ ಕ್ಷೇತ್ರ ದಲ್ಲಿನ ಸಾಧಕರು ಎಲ್ಲರನ್ನೂ ಆಹ್ವಾನಿಸಲಾಗುವುದು. ಅಧಿವೇಶನದಲ್ಲಿ ವಿಶೇಷವಾಗಿ ಮಹಿಳಾ. ರೈತ, ಯುವ ಜನಾಂಗ ಕುರಿತು ಚರ್ಚೆ ನಡೆಯಲಿದೆ.ಪ್ರತಿ ಐದು ವರ್ಷಕ್ಕೊಮ್ಮೆ ಮಹಾ ಅಧಿವೇಶನ ನಡೆಸಿಕೊಂಡು ಬರಲಾಗುತ್ತದೆ. ಕಳೆದ ವರ್ಷವೇ ದಾವಣಗೆರೆ ಯಲ್ಲಿ ಅಧಿವೇಶನಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಕೊರೊನಾ, ವಿಧಾನ ಸಭಾ ಚುನಾವಣೆಯ ನೀತಿ ಸಂಹಿತೆ ಮುಂತಾದ ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿತ್ತು.
ಈಗ ಡಿ.23 ಮತ್ತು 24 ರಂದು ದಾವಣಗೆರೆಯ ಎಂ.ಬಿ.ಎ. ಕಾಲೇಜು ಮೈದಾನದಲ್ಲಿ ನಡೆಸಲಾಗುವುದು. ಸಾಮಾನ್ಯವಾಗಿ ಮಹಾ ಅಧಿವೇಶನವನ್ನು ಮೂರು ದಿನಗಳ ಕಾಲ ನಡೆಸಲಾಗುತ್ತಿತ್ತು. ಬರದ ಹಿನ್ನೆಲೆಯಲ್ಲಿ ಎರಡು ದಿನಕ್ಕೆ ಸೀಮಿತಗೊಳಿಸಲಾಗಿದೆ. ಆದರೂ, ಅರ್ಥಪೂರ್ಣ, ಯಶಸ್ವಿಯಾಗಿ ನಡೆಸಲಾಗುವುದು ಎಂದು ತಿಳಿಸಿದರು.
ಡಿ.23 ಮತ್ತು 24 ರಂದು ದಾವಣಗೆರೆಯ ಎಂ.ಬಿ.ಎ. ಕಾಲೇಜು ಮೈದಾನದಲ್ಲಿ ನಡೆಯುವ ಮಹಾ ಅಧಿ ವೇಶನದಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಇತರೆ ರಾಜ್ಯಗಳ ಪ್ರತಿನಿಧಿಗಳೊಂದಿಗೆ ದೇಶ ಮತ್ತು ವಿದೇಶದಲ್ಲಿರುವ ಸಮುದಾಯ ಬಾಂಧವರು ಸಹ ಭಾಗವಹಿಸುವರು. ಮಹಾ ಅಧಿವೇಶನದ ಸವಿ ನೆನಪಿಗಾಗಿ ಸ್ಮರಣ ಸಂಚಿಕೆಯನ್ನ ಹೊರ ತರಲಾಗುವುದು. ಮಹಾ ಅಧಿವೇಶನವು ಯಶಸ್ವಿಯಾಗಿ ನಡೆ ಸುವ ನಿಟ್ಟಿನಲ್ಲಿ ವೇದಿಕೆ, ಮೆರವಣಿಗೆ, ಊಟ, ಸಾರಿಗೆ, ವಸತಿ, ಸ್ಮರಣ ಸಂಚಿಕೆ ಒಳಗೊಂಡಂತೆ ಹಲವಾರು ಸಮಿತಿಗಳ ರಚನೆ ಮಾಡಿ, ಜವಾಬ್ದಾರಿ ವಹಿಸಲಾಗುವುದು ಎಂದು ತಿಳಿಸಿದರು.
ಕಳೆದ ಅಧಿವೇಶನಗಳಲ್ಲಿ ಕೈಗೊಂಡಿರುವ ನಿರ್ಣಯ ಗಳಂತೆ ವಿವಿಧ ಭಾಗದಲ್ಲಿ ಹಾಸ್ಟೆಲ್ ನಿರ್ಮಾಣ, ಐಎಎಸ್, ಐಪಿಎಸ್, ಕೌಶಲ್ಯ ತರಬೇತಿ ಕೇಂದ್ರಗಳ ಪ್ರಾರಂಭ ಒಳಗೊಂಡಂತೆ ಅನೇಕ ನಿರ್ಣಯಗಳು ಕಾರ್ಯರೂಪಕ್ಕೆ ಬಂದಿವೆ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಉಪಾಧ್ಯಕ್ಷರಾದ ಎಸ್.ಎಸ್. ಗಣೇಶ್, ಅಥಣಿ ಎಸ್. ವೀರಣ್ಣ, ಅಣಬೇರು ರಾಜಣ್ಣ, ರಾಜ್ಯ ಅಧ್ಯಕ್ಷ ಎನ್. ತಿಪ್ಪಣ್ಣ, ವಿಧಾನ ಪರಿಷತ್ತು ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಬಿ.ಸಿ. ಉಮಾಪತಿ, ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಬಿದರಿ, ಆಂಧ್ರಪ್ರದೇಶದ ಶಿವರಾಜ್, ಸರ್ವಮಂಗಳಮ್ಮ, ಜಿಲ್ಲಾ ಅಧ್ಯಕ್ಷ ದೇವರಮನೆ ಶಿವಕುಮಾರ್ ಇದ್ದರು.