ಬೆಂಗಳೂರು:ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದ್ದು, ಕೆಲವು ಕಡೆ ಕುಡಿಯುವ ನೀರಿಗೂ ತೊಂದರೆ ಉಂಟಾಗಿದೆ. ಬಿತ್ತಿದ ಬೆಳೆಗಳು ಒಣಗಿ ಹೋಗಿವೆ. ಈ ಮುಂಗಾರು ಆರಂಭವೂ ಕೂಡ ತಡವಾಗಿತ್ತು. ಇದೀಗ ಮುಂಗಾರು ಮಳೆ ಸಂಪೂರ್ಣ ಕೈ ಕೊಟ್ಟಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬುತ್ತಿದ ಬೆಳೆಗೆ ನೀರಿಲ್ಲದೆ ಬರದ ಛಾಯೆ ಆವರಿಸಿದೆ. ರಾಜ್ಯದ ಜನತೆಗೆ ಮಳೆ ಕೊರತೆ ನಡುವೆ, ಇದೀಗ ಹವಾಮಾನ ಇಲಾಖೆ ರೈತರಿಗೆ ಸಿಹಿ ಸುದ್ದಿ ನೀಡಿದೆ.
ಸೆಪ್ಟಂಬರ್ ನಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ 2ರ ನಂತರ ರಾಜ್ಯವೂ ಸೇರಿದಂತೆ ದೇಶಾದ್ಯಂತ ಮುಂಗಾರು ಮಾರುತಗಳ ಸ್ಥಿತಿ ಸುಧಾರಿಸಲಿದ್ದು ಉತ್ತಮ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆಯ ಮುಖ್ಯಸ್ಥರಾದ ಮೃತ್ಯುಂಜಯ ಮೊಹಾಪಾತ್ರ ಮಾಹಿತಿ ನೀಡಿದ್ದು, ಬಂಗಾಳ ಕೊಲ್ಲಿಯಲ್ಲಿ ಸೆಪ್ಟೆಂಬರ್ 2ರ ನಂತರ ಸೃಷ್ಟಿಯಾಗುವ ಮೇಲ್ಮೈಸುಳಿಗಾಳಿ ಪರಿಸ್ಥಿತಿ ನಂತರ ವಾಯುಭಾರ ಕುಸಿತವಾಗಿ ಮಾರ್ಪಡುವ ಸಾಧ್ಯತೆಯಿದ್ದು, ಇದರಿಂದ ದಕ್ಷಿಣ ಭಾರತ, ಮಧ್ಯ ಭಾರತ, ಪೂರ್ವ ಭಾರತದ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ಸಂಭವ ಇದೆ ಎಂದು ತಿಳಿಸಿದ್ದಾರೆ.ಆಗಸ್ಟ್ ನಲ್ಲಿ ಅತ್ಯಂತ ಕಡಿಮೆ ಮಳೆ ಪ್ರಮಾಣ ದಾಖಲಾಗಿದೆ. 20 ದಿನ ಸತತವಾಗಿ ಮಳೆ ಬಾರದೆ ಶೇ. 33 ರಷ್ಟು ಮಳೆ ಕೊರತೆ ಆಗಿದೆ. ಸೆಪ್ಟೆಂಬರ್ 2ರಿಂದ ಉತ್ತಮ ಮಳೆ ಆಗಲಿದೆ ಎಂದು ಹೇಳಲಾಗಿದೆ.



