ಭದ್ರಾವತಿ: ಭದ್ರಾ ಜಲಾಶಯ ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಆಗುತ್ತಿದ್ದು, ಇಂದು (ಆ.08) ಬೆಳಗ್ಗೆ 6 ಗಂಟೆ ವೇಳೆಗೆ ಕೇವಲ 6,027 ಕ್ಯೂಸೆಕ್ ಒಳ ಹರಿವಿದೆ. ಇಂದಿನ ನೀರಿನ ಮಟ್ಟ 166.1 ಅಡಿಯಷ್ಟಿದ್ದು, ಕಳೆದ ವರ್ಷ ಇದೇ ದಿನ 183.8 ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಇದಲ್ಲದೆ ಡ್ಯಾಂ ನಿಂದ ನಾಲೆಗಳಿಗೆ ಒಳ ಹರಿವಿನ ಪ್ರಮಾಣದಲ್ಲಿ ನೀರು ಹೊರ ಬಿಡಲಾಗಿತ್ತು.
ಈ ವರ್ಷ ಜೂನ್ ನಲ್ಲಿ ನಿರೀಕ್ಷತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆ ನೀರು ಸಂಗ್ರಹ ಕುಸಿದಿದೆ. ಕಳೆದ ವರ್ಷದ ಈ ದಿನಕ್ಕೆ ಹೋಲಿಸಿದ್ದರೆ 17 ಅಡಿಯಷ್ಟು ನೀರು ಕೊರತೆಯಲ್ಲಿದೆ. ನಿರೀಕ್ಷಿತ ಮಟ್ಟದಲ್ಲಿ ಭದ್ರಾ ಡ್ಯಾಂ ತುಂಬಾದಿದ್ದರಿಂದ ಅಚ್ಚುಕಟ್ಟು ಪ್ರದೇಶದ ಭತ್ತ, ಅಡಿಕೆ, ತೆಂಗು, ಮೆಕ್ಕೆಜೋಳ ಬೆಳೆಗಾರರಲ್ಲಿ ಆತಂಕ ಉಂಟು ಮಾಡಿದೆ. ಕಳೆದ 15 ದಿನದ ಹಿಂದೆ ಉತ್ತಮ ಮಳೆಯಾಗಿತ್ತು. ಇದೀಗ ಮತ್ತೆ ಮಳೆ ತಗ್ಗಿದೆ. ಪ್ರಸ್ತುತ 6 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರಿನ ಒಳ ಹರಿವಿದ್ದು, ಡ್ಯಾಂ ತುಂಬುವ ಭರವಸೆ ಇದೆ. ಭರ್ತಿಗೆ 20 ಅಡಿ ಮಾತ್ರ ಬಾಕಿ ಇದೆ.
ಆಗಸ್ಟ್ ಮೊದಲ ವಾರ ಸಭೆ ನಡೆಯಲಿದ್ದು, ಅಂದೇ ನೀರು ಬಿಡುಗಡೆ ದಿನ ನಿಗದಿ ಮಾಡಲಾಗುವುದು ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದ್ದರು. ಜಿಲ್ಲಾಧಿಕಾರಿಗಳು ಸಹ 163 ಅಡಿ ತಲುಪಿದ ನಂತರ ನೀರು ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ಪ್ರಸ್ತುತ 166 ಅಡಿ ನೀರು ತುಂಬಿದರೂ ನೀರು ಬಿಡುವ ಮುನ್ಸೂಚನೆ ಸಿಕ್ಕಿಲ್ಲ.
- ಡ್ಯಾಂ ನೀರಿನ ಸಂಗ್ರಹದ ವಿವರ
- ಇಂದಿನ ನೀರಿನ ಮಟ್ಟ 166.1 ಅಡಿ
- ಪೂರ್ಣ ನೀರಿನ ಮಟ್ಟ:186 ಅಡಿ
- ಇಂದಿನ ಸಾಮರ್ಥ್ಯ: 48.820 ಟಿಎಂಸಿ
- ಒಟ್ಟು ಸಾಮರ್ಥ್ಯ: 71.535 ಟಿಎಂಸಿ
- ಒಳ ಹರಿವು: 6027 ಕ್ಯೂಸೆಕ್
- ಒಟ್ಟು ಹೊರ ಹರಿವು: 194 ಕ್ಯೂಸೆಕ್
- ಬಲದಂಡೆ ನಾಲೆ: 0.00 ಕ್ಯೂಸೆಕ್
- ಎಡದಂಡೆ ನಾಲೆ: 0.00 ಕ್ಯೂಸೆಕ್
- ಕಳೆದ ವರ್ಷ ಈ ದಿನ : 183.8 ಅಡಿ



