ಡಿವಿಜಿ ಸುದ್ದಿ, ಹರಿಹರ: 17 ಶಾಸಕ ತ್ಯಾಗ, ಪಂಚಮಸಾಲಿ ಸಮಾಜದ ಆರ್ಶೀವಾದದಿಂದ ನಾನು ಮುಖ್ಯಮಂತ್ರಿ ಖುರ್ಚಿಯಲ್ಲಿ ಕುಂತಿದ್ದೇನೆ. ಶ್ರೀ ವಚನನಾಂದ ಸ್ವಾಮೀಜಿಗಳು ಯಾವುದೇ ಸಲಹೆ, ಸೂಚನೆ ನೀಡಿದರು ನಾನು ತಲೆಬಾಗುತ್ತೇನೆ. ಬೇಡವೆಂದಲ್ಲಿ ನಾಳೆಯೇ ರಾಜೀನಾಮೆ ನೀಡಲು ಸಿದ್ಧವಿದ್ದೇನೆ ಎನ್ನುವ ಮೂಲಕ ಸಚಿವ ಸ್ಥಾನಕ್ಕೆ ಒತ್ತಾಯ ಮಾಡಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಹರಿಹರದ ವೀರಶೈವ ಪಂಚಮಸಾಲಿ ಮಠದಲ್ಲಿ ನಡೆಯುತ್ತಿರುವ ಪ್ರಥಮ ಹರ ಜಾತ್ರಾ ಮಹೋತ್ಸವದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಬೆಳ್ಳಿ ಬೆಡಗು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
17 ಶಾಸಕರ ತ್ಯಾಗದಿಂದ ಸಿಎಂ ಆಗಿದ್ದೇನೆ. ರಾಜ್ಯದಲ್ಲಿ ಹೆಚ್ಚು ಜನ ಸಂಖ್ಯೆ ಇರುವ ಪಂಚಮಸಾಲಿ ಸಮಾಜದ ಆರ್ಶೀವಾದಿಂದ ಖರ್ಚಿಯಲ್ಲಿ ಕಂತಿದ್ದೇನೆ. ನಾಲ್ಕು ಸಲ ಮುಖ್ಯಮಂತ್ರಿಯಾಗಿರುವ ನಾನು ಸಿಎಂ ಸ್ಥಾನಕ್ಕೆ ಅಂಟಿಕೊಂಡು ಕುಂತಿಲ್ಲ. ಪಂಚಮಸಾಲಿ ಸಮಾಜದ ಶ್ರೀಗಳು ಯಾವುದೇ ಸಲಹೆ ಸೂಚನೆ ನೀಡಿದರೂ, ವೈಯಕ್ತಿಕವಾಗಿ ಭೇಟಿ ಮಾಡಿ ಸಲಹೆ ಪಡೆಯುತ್ತೇನೆ.
ನಾನು ಇನ್ನು ಮೂರುವರೆ ವರ್ಷ ಆಡಳಿತ ನಡೆಸಲು ಎಲ್ಲಾ ಸ್ವಾಮೀಜಿಗಳ ಸಹಕಾರ ಬೇಕಿದೆ. ಇದಕ್ಕಾಗಿ ಎಲ್ಲಾ ಸ್ವಾಮೀಜಿಗಳನ್ನು ಒಂದೆಡೆ ಸೇರಿಸಿ ಸಲಹೆ ಸೂಚನೆ ಪಡೆಯುತ್ತೇನೆ. ನಿಮ್ಮ ಸಲಹೆ ಸೂಚನೆಗೆ ನಾನು ತಲೆಬಾಗಿ ಸ್ವೀಕರಿಸುತ್ತೇನೆ. ನೀವು ಬೇಡವೆಂದರೆ ನಾನು ನಾಳೆಯೇ ರಾಜೀನಾಮೆಗೆ ಸಿದ್ಧ. ಸ್ವಾಮೀಜಿ ಅವರು ಪರಿಸ್ಥಿತಿ ಅರ್ಥ ಮಾಡಿಕೊಂಡು ಮಾತನಾಡಬೇಕು ಎನ್ನುವ ಸಚಿವ ಸ್ಥಾನಕ್ಕೆ ಒತ್ತಾಯ ಮಾಡಿದರೆ ನಾಳೆಯೇ ರಾಜೀನಾಮೆಗೆ ಸಿದ್ಧ ಎಂದರು.
125 ವರ್ಷದಲ್ಲಿಯೇ ಕಾಣದ ಭೀಕರ ಪ್ರವಾಹದಿಂದ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ. ಸಂಕಷ್ಟದಲ್ಲಿರುವ ರೈತರನ್ನು ಸ್ವಾಭಿಮಾನದಿಂದ ಬದುಕುವಂತೆ ಮಾಡಲು ಹಗಲು-ರಾತ್ರಿ ಎನ್ನದೇ ಯೋಚನೆಯಲ್ಲಿದ್ದೇನೆ. ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಣೆಯತ್ತ ನಿರಂತರ ಪ್ರಯತ್ನ ಮಾಡುತ್ತಿದ್ದೇನೆ. ರಾತ್ರಿ 12 ಗಂಟೆಗೆ ಎದ್ದು ಮುಂದೆ ಏನು ಮಾಡಬೇಕು ಎಂಬುದರ ಬಗ್ಗ ಯೋಚನೆ ಮಾಡುತ್ತೇನೆ. ರೈತರ ಋಣ ತೀರಿಸಬೇಕಿದೆ. ಇದಕ್ಕೆ ಎಲ್ಲಾ ಸ್ವಾಮೀಜಿಗಳ ಸಹಕಾರಬೇಕು ಎಂದರು.
ಪಂಚಮಸಾಲಿ ಸಮಾಜ ಕೃಷಿ, ವ್ಯಾಪಾರ ಎರಡೂ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ, ಬೆಳವಾಡಿ ಮಲ್ಲಮ್ಮ, ಅಕ್ಕಮ ದೇವಿಯರನ್ನು ಕೊಟ್ಟಂತಹ ಸಮಾಜ ಪಂಚಮಸಾಲಿ ಸಮಾಜ. ರಾಜ್ಯದಲ್ಲಿ ಬಹು ಸಂಖ್ಯಾತರಾಗಿರುವ ಪಂಚಮಸಾಲಿ ಸಮಾಜ ದೇಶ, ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದೆ. ವಚನಾನಂದ ಶ್ರೀಗಳು ತಮ್ಮ ಯೋಗಾದ ಮೂಲಕ ಸಮಾಜವನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಲಿದ್ದಾರೆ. ನಿಮ್ಮ ಸಮಜಕ್ಕೆ ಅಗತ್ಯವಾದ ಸಹಕಾರ ನೀಡಲು ನಾನು ಸದಾ ಸಿದ್ಧನಿದ್ದೇನೆ ಎಂದು ತಿಳಿಸಿದರು.



