ದಾವಣಗೆರೆ: ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1.50 ಲಕ್ಷ ಮೌಲ್ಯದ 4 ಬೈಕ್ ಕಳ್ಳತನ ಮಾಡಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಪೊಲೀಸರು ಬಂಧಿಸಿ ಬಾಲ ನ್ಯಾಯಾಲಕ್ಕೆ ಒಪ್ಪಿಸಿದ್ದಾರೆ.
ದಿನಾಂಕ: 21-04-2023ರಂದು ದಾವಣಗೆರೆ ನಗರದ ಪಿ.ಜೆ. ಬಡಾವಣೆಯ ಮೃತ್ಯುಂಜಯ ನರ್ಸಿಂಗ್ ಹೋಂ ಮುಂಭಾಗ ನಿಲ್ಲಿಸಿದ್ದ ಸ್ಪೆಂಡರ್ ಪ್ಲಸ್ ಬೈಕ್ ಕಳ್ಳತನವಾಗಿದೆ ಎಂದು ಸುನೀಲ್ ಎಂಬಾತ ಬಡಾವಣೆ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಜೂ.26ರಂದು ಠಾಣಾ ಸರಹದ್ದಿನಲ್ಲಿ ಚೀತಾ -9 ಸಿಬ್ಬಂದಿ ಪ್ರವೀಣ್ ಗಸ್ತಿನಲ್ಲಿದ್ದಾಗ ಅನುಮಾನಾಸ್ಪದವಾಗಿ ಸಿಕ್ಕ ಬಾಲಕನನ್ನು ವಿಚಾರ ಮಾಡಿದ್ದು, ಬೈಕ್ ದಾಖಲಾತಿಗಳನ್ನು ಹಾಜರು ಪಡಿಸದ ಕಾರಣ ಠಾಣೆಗೆ ಕರೆದುಕೊಂಡು ಬರಲಾಗಿತ್ತು. ಆಗ ಪಿ.ಎಸ್.ಐ ಮಾಳವ್ವ ಹೆಚ್ ಅವರು ವಿಚಾರ ಮಾಡಿದ್ದಾಗ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಬಾಲಕ ದಾವಣಗೆರೆ ನಗರದಲ್ಲಿ ಬಡಾವಣೆ ಠಾಣಾ ವ್ಯಾಪ್ತಿಯಲ್ಲಿ 02ಬೈಕ್ ಗಳು, ಬಸವನಗರ ಠಾಣಾ ವ್ಯಾಪ್ತಿಯಲ್ಲಿ 01 ಬೈಕ್ ಮತ್ತು ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 01 ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿ ಹಾಜರುಪಡಿಸಿದ ಬೈಕಗಳನ್ನು ವಶಕ್ಕೆ ಪಡೆಯಲಾಗಿದೆ.ಬಾಲಕನನ್ನು ಸುರಕ್ಷತೆಯ ಸಲುವಾಗಿ ಬಾಲ ನ್ಯಾಯ ಮಂದಿರಕ್ಕೆ ಬಿಡಲಾಗಿದೆ.
ಈ ಕಾರ್ಯಾಚರಣೆಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಾಮಗೊಂಡ ಬಸರಗಿ ಹಾಗೂ ದಾವಣಗೆರೆ ನಗರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನಲ್ಲಿ ಪೊಲೀಸ್ ನಿರೀಕ್ಷಕ ಧನಂಜಯ ನೇತೃತ್ವದಲ್ಲಿ ಬಡಾವಣೆ ಪೊಲೀಸ್ ಠಾಣೆಯ ಪಿಎಸ್ಐ ಮಾಳವ್ವ ಹೆಚ್. ಸಿಬ್ಬಂದಿಗಳಾದ ಪ್ರವೀಣ್, ಸಿದ್ದೇಶ್, ಅರುಣ ಕುಮಾರ, ಸಯ್ಯದ್, ಗೀತಾ ಇವರು1.50 ಲಕ್ಷ ಮೌಲ್ಯದ 04 ಬೈಕ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ. ಐಶ್ಲಾಘಿಸಿದ್ದಾರೆ.



