ಬೆಂಗಳೂರು: ಜೂನ್ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳದೆ, ರಾಜ್ಯದಾದ್ಯಂತ ಮಳೆ ಕುಂಠಿತಗೊಂಡಿದೆ. ಜೂ.1ರಿಂದ ಜೂ.25ರವರೆಗೆ ರಾಜ್ಯಾದ್ಯಂತ ವಾಡಿಕೆಯಂತೆ 160 ಮಿಮೀ ಮಳೆಯಾಗಬೇಕಿತ್ತು. ಆದರೆ, 63 ಮಿಮೀ ಮಾತ್ರ ಮಳೆಯಾಗಿದ್ದು, ಶೇ.61ರಷ್ಟು ಮಳೆ ಕೊರತೆಯಾಗಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಜೂನ್ ನಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮುಂಗಾರು ಮಳೆ ಬೀಳಲಿದೆ ಎಂದು ಮೇ ಕೊನೆಯ ವಾರದಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿತ್ತು. ಜೂನ್ ನಲ್ಲಿ ಮಲೆನಾಡಲ್ಲಿ ಶೇ.77, ಕರಾವಳಿಯಲ್ಲಿ ಶೇ.66, ಉತ್ತರ ಕರ್ನಾಟಕದಲ್ಲಿ ಶೇ.58 ಹಾಗೂ ದಕ್ಷಿಣ ಕರ್ನಾಟಕದಲ್ಲಿ ಶೇ.22ರಷ್ಟು ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿದಿದೆ. ಮಳೆ ಕೊರತೆಯಿಂದ ಕೆರೆ, ಕಟ್ಟೆ, ಡ್ಯಾಂ ಗಳು ಇನ್ನೂ ಕೂಡ ಭರ್ತಿಯಾಗಿಲ್ಲ. ಇದರಿಂದಾಗಿ ಕೃಷಿ ಚಟುವಟಿಕೆಗೆ ಹಿನ್ನಡೆ ಉಂಟಾಗಿದ್ದು, ರೈತಾಪಿ ವರ್ಗ ಆತಂಕಪಡುವಂತಾಗಿದೆ.



