ದಾವಣಗೆರೆ: ಕಂದಾಯ ಇಲಾಖೆಯಿಂದ ಸಾಮಾಜಿಕ ಭದ್ರತಾ ಯೋಜನೆಗಳಡಿ ಮಾಸಿಕ ಪಿಂಚಣಿ ಮತ್ತು ಸಹಾಯಧನ ಪಡೆಯುವ ಫಲಾನುಭವಿಗಳು ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ತಮ್ಮ ಬ್ಯಾಂಕ್, ಅಂಚೆ ಉಳಿತಾಯ ಖಾತೆಗೆ National Payments Corporation of India (NPCl) ಜೊತೆ ಜೋಡಣೆ ಮಾಡಿಸುವಂತೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ ವೇತನ, ವಿಧವಾ ವೇತನ, ರೈತರ ಆತ್ಮಹತ್ಯೆ ಪ್ರಕರಣಗಳಡಿ ರೈತನ ಪತ್ನಿಗೆ ನೀಡುವ ವಿಧವಾ ವೇತನ, ಆಸಿಡ್ ಪ್ರಕರಣಗಳಡಿ ನೀಡುವ ವೇತನ, ಅಂಗವಿಕಲರ ವೇತನ, ಮನಸ್ವಿನಿ, ಮೈತ್ರಿ ಮತ್ತು ರಾಷ್ಟ್ರೀಯ ಕುಟುಂಬ ನೆರವು ಯೋಜನೆಗಳಡಿ ಜೂನ್ ತಿಂಗಳಿಂದ ಆಧಾರ್ ಆಧಾರಿತ ನೇರವಾಗಿ ಹಣ ಪಾವತಿಸುವುದರಿಂದ, ಫಲಾನುಭವಿಗಳು ಬ್ಯಾಂಕ್, ಅಂಚೆ ಕಚೇರಿಗೆ ತೆರಳಿ ಆಧಾರ್ ನಂಬರ್ ಅನ್ನು ಉಳಿತಾಯ ಖಾತೆಗೆ ಎನ್.ಪಿ.ಸಿ.ಐ ಜೋಡಣೆ ಮಾಡಿಸಬೇಕು. ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಮಾಸಿಕ ಪಿಂಚಣಿ ಮತ್ತು ಸಹಾಯಧನ ಪಡೆಯಲು ತೊಂದರೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.



