ಬೆಂಗಳೂರು: ಜೂನ್ 15 ಕಳೆದರೂ ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೆ, ವಿವಿಧ ಜಿಲ್ಲೆಗಳಲ್ಲಿ ಬರದ ಛಾಯೆ ಮೂಡಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಮುಂಗಾರು ಮಳೆ ಮತ್ತಷ್ಟು ತಡವಾಗಲಿದೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ಎಂಡಿಸಿ) ಮಾಹಿತಿ ಪ್ರಕಾರ ಜೂನ್ 1 ರಿಂದ 13ರ ತನರ ರಾಜ್ಯದಲ್ಲಿನ ಮಳೆಯ ಕೊರತೆ ಶೇ 66ರಷ್ಟು ಮಳೆ ಕೊರತೆಯಾಗಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಲಿದ್ದು, ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಬಿಪೊರ್ಜಾಯ್ ಚಂಡಮಾರುತ ಪರಿಣಾಮ ನೈಋತ್ಯ ಮುಂಗಾರು ಮಳೆ ವಿಳಂಬವಾಗಿದೆ. ಚಂಡಮಾರುತದಿಂದ ಮುಂಗಾರು ದುರ್ಬಲವಾಗಿದೆ. ಇನ್ನೂ ಎರಡು ವಾರಗಳ ಕಾಲ ಮಳೆ ವಿಳಂಬವಾಗಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಜುಲೈನಲ್ಲಿ ಮುಂಗಾರು ಮಳೆಯ ಅಬ್ಬರ ನಿರೀಕ್ಷೆ ಮಾಡಬಹುದಾಗಿದೆ.
ಜೂನ್ ತಿಂಗಳ ಆರಂಭದಲ್ಲಿಯೇ ಅಬ್ಬರಿಸಬೇಕಿದ್ದ ಮುಂಗಾರು ಮಳೆಯ ಸುಳಿವಿಲ್ಲ. ವಿವಿಧ ಜಿಲ್ಲೆಗಳಲ್ಲಿ ಮಳೆ ಇಲ್ಲದೇ ಕುಡಿಯುವ ನೀರಿಗೂ ಸಹ ಕೊರತೆ ಉಂಟಾಗಿದೆ.ಕೆಎಸ್ಎನ್ಎಂಡಿಸಿ ಮಾಹಿತಿ ಪ್ರಕಾರ ಜೂನ್ 1 ರಿಂದ 13ರ ತನರ ರಾಜ್ಯದಲ್ಲಿನ ಮಳೆಯ ಕೊರತೆ ಶೇ 66. ಈ ಅವಧಿಯಲ್ಲಿ ವಾಡಿಕೆಯಂತೆ 70 ಮಿ. ಮೀ. ಮಳೆಯಾಗಬೇಕಿತ್ತು. ಆದರೆ ಕೇವಲ 24 ಮಿ. ಮೀ. ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ 44, ಉತ್ತರ ಒಳನಾಡು ಶೇ 58, ಮಲೆನಾಡಿನಲ್ಲಿ ಶೇ 78 ಹಾಗೂ ಕರಾವಳಿಯಲ್ಲಿ ಶೇ 73ರಷ್ಟು ವಾಡಿಕೆಗಿಂತ ಮಳೆ ಕೊರತೆ ಇದೆ.



