ದಾವಣಗೆರೆ; ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (ದೂಡಾ) ಮತ್ತು ಜಿಲ್ಲಾಡಳಿತ ಹಳೇ ಕುಂದುವಾಡ ಬಳಿ ಹೊಸ ಲೇಔಟ್ ನಿರ್ಮಿಸುವುದಾಗಿ ರೈತರಿಂದ ಜಮೀನು ಖರೀದಿಸಿ, ಬಡಾವಣೆ ನಿರ್ಮಿಸದೇ ರೈತರ ನೆಮ್ಮದಿ ಕಸಿದೆ. ಹೀಗಾಗಿ ದಾವಣಗೆರೆಗೆ ಮಾ.25 ರಂದು ಆಗಮಿಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ್ ಭಾಗವಹಿಸುವ ಕಾರ್ಯಕ್ರಮ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಹಳೇ ಕುಂದುವಾಡ ಗ್ರಾಮದ ರೈತ ಜೆ.ಆರ್. ಮಹಾಂತೇಶ ಮಾತನಾಡಿ, ಜಿಲ್ಲಾಡಳಿತ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಆಡಳಿತ ವರ್ಗದ ರೈತ ವಿರೋಧಿ ನಡೆ ವಿರೋಧಿ ನೀತಿ ಅನುಸರಿಸುತ್ತಿದೆ. ಹೀಗಾಗಿ ಕಪ್ಪು
ಬಾವುಟ ಪ್ರದರ್ಶಿಸಲಾಗುವುದು. ಇದಲ್ಲದೆ ದೂಡಾ ಕಚೇರಿಗೆ ಬೀಗ ಜಡಿದು ಮುತ್ತಿಗೆ
ಹಾಕುವುದು ಎಂದರು.
ಹಳೆ ಕುಂದುವಾಡ ರೈತರನ್ನು ಕಳೆದ 3 ವರ್ಷಗಳಿಂದ ಕಚೇರಿಗೆ ಅಲೆದಾಡಿಸಿ, ದೂಡಾ ಅಧಿಕಾರಿಗಳು ರೈತರ ನೆಮ್ಮದಿ ಕಸಿದಿದ್ದಾರೆ. ಜಿಲ್ಲಾಧಿಕಾರಿ ಭರವಸೆಗೆ ಒಪ್ಪಿ,ಜಮೀನು ನೀಡಲು ರೈತರು ಮುಂದಾಗಿದ್ದರು. ಆದರೆ, ಒಪ್ಪಿಗೆ ಸೂಚಿಸಿದ್ದ ರೈತರಿಗೆ ಸ್ಪಂದಿಸಬೇಕಾಗಿದ್ದ ದೂಡಾವು 2 ವರ್ಷಗಳಾದರೂ ಜಮೀನು ಖರೀದಿಸದೆ ಅಲೆದಾಡಿಸಿದ್ದಾರೆ ಎಂದು ಆರೋಪಿಸಿದರು.
53 ಎಕರೆ ಪ್ರದೇಶವು ಹಿಂದುಳಿದ ಸಮುದಾಯಕ್ಕೆ ಸೇರಿದವರ ಜಮೀನುಗಳಾಗಿವೆ. ಹಿಂದೆ ಇದು ನೇರ
ಖರೀದಿಯೆಂದು ತಿಳಿಸಿ, ಯಾವುದೇ ಕಾರಣಕ್ಕೂ ಭೂಸ್ವಾಧಿನ ಪ್ರಕ್ರಿಯೆ ಆಗುವುದಿಲ್ಲ ಎಂದು ಹೇಳಿದ್ದ ಪ್ರಾಧಿಕಾರ, ಈಗ ಭೂಸ್ವಾಧೀನಕ್ಕೆ ಅನುಮತಿ ಕೇಳುತ್ತಿರುವುದು ಸರಿಯಲ್ಲ. ದೂಡಾ ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಉದ್ದೇಶಿತ ಬಡಾವಣೆಗಾಗಿ ಅನುದಾನ
ಮೀಸಲಿರಿಸಿದ್ದಾರೆ. ದೂಡಾ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಜಮೀನು ಭೂಸ್ವಾಧೀನಕ್ಕೆ ಮುಂದಾಗುತ್ತಿರುವುದು ರೈತ ವಿರೋಧಿ ನಡೆಯಾಗಿದೆ ಎಂದು ಕಿಡಿಕಾರಿದರು.
ಈ ವೇಳೆ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್, ಗ್ರಾಮದ ರೈತರಾದ ಎನ್.ಮಲ್ಲಿಕಾರ್ಜುನ, ರಾಮಪ್ಪ, ಎಚ್.ಸೋಮಶೇಖರ, ಶಿವಪ್ಪ, ಸಿ.ಹರೀಶ್,
ಕೆ.ತಿಪ್ಪೇಶ್, ಬಸವರಾಜ್ ಮತ್ತಿತರರಿದ್ದರು.



