ದಾವಣಗೆರೆ: ತಮಿಳುನಾಡು ಮೂಲದ ವ್ಯಾಪಾರಿಗೆ 5 ರೂಪಾಯಿ ಕೆ.ಜಿ. ಈರುಳ್ಳಿ ಕೊಡುವುದಾಗಿ ನಂಬಿಸಿ, 4 ಲಕ್ಷ ವಂಚನೆ ಮಾಡಿದ ಘಟನೆ ನಡೆದಿದೆ. ತಾಲ್ಲೂಕಿನ ಕುಕ್ಕುವಾಡ ಗ್ರಾಮದ ನಾಲ್ವರು ಈರುಳ್ಳಿ ಕೊಡುವುದಾಗಿ ನಂಬಿಸಿ, ತಮಿಳುನಾಡಿನ ವ್ಯಾಪಾರಿಯೊಬ್ಬರಿಗೆ ವಂಚಿಸಿದ್ದಾರೆ. ತಮಿಳುನಾಡಿನ ದಿಂಡುಗಲ್ ಜಿಲ್ಲೆಯ ಪಳನಿ ತಾಲ್ಲೂಕಿನ ಬಾಲಸಮುದ್ರಂ ಗ್ರಾಮದ ನಿವಾಸಿ ತಂಗವೇಲು ಮೋಸ ಹೋದ ವ್ಯಾಪಾರಿಯಾಗಿದ್ದಾರೆ.
ಕುಕ್ಕುವಾಡ ಗ್ರಾಮದ ರಮೇಶ ಎಂಬಾತ ತಂಗವೇಲು ಅವರಿಗೆ ಮೊಬೈಲ್ ಕರೆ ಮಾಡಿ ನಾನು ಈರುಳ್ಳಿ ವ್ಯಾಪಾರಿ 5ರೂ.ಗೆ ಒಂದು ಕೆ.ಜಿ. ಈರುಳ್ಳಿ ಕೊಡುವುದಾಗಿ ಹೇಳಿದ್ದಾನೆ. ವಿಡಿಯೋ ಕಾಲ್ ಮಾಡಿ ಜಮೀನಲ್ಲಿ ಬೆಳೆದಿದ್ದ ಈರುಳ್ಳಿ ತೋರಿಸಿದ್ದರು. ಇದನ್ನು ನಂಬಿದ ತಂಗವೇಲು ಮಾರ್ಚ್ 2ರಂದು ತಮಿಳುನಾಡಿನಿಂದ ಕುಕ್ಕವಾಡಕ್ಕೆ ಬಂದಿದ್ದರು. ಈ ವೇಳೆ ರಮೇಶ ಬೈಕ್ನಲ್ಲಿ ಕುಕ್ಕವಾಡಕ್ಕೆ ಕರೆದುಕೊಂಡು ಹೋಗಿ ಇನ್ನೂ ಮೂವರನ್ನು ಪರಿಚಯಿಸಿದ್ದಾರೆ. ಮುಂಗಡ ಹಣ ಕೊಟ್ಟರೆ ಈರುಳ್ಳಿ ತುಂಬಿಸಿ ಕಳುಹಿಸಿಕೊಡುವುದಾಗಿ ನಂಬಿಸಿದ್ದಾರೆ.
ಇದನ್ನು ನಂಬಿದ ತಂಗವೇಲು ಅವರಿಗೆ 4 ಲಕ್ಷ ಮುಂಗಡ ಹಣ ನೀಡಿ ಹೋಗಿದ್ದಾರೆ. ಹಣ ಕೊಟ್ಟು 8 ದಿನವಾದರೂ ಈರುಳ್ಳಿ ಕಳುಹಿಸಿಲ್ಲ. ಹೀಗಾಗಿ ಅವರು ಕೊಟ್ಟಿದ್ದ ಮೊಬೈಲ್ ನಂಬರ್ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿದೆ ಎಂದು ಹದಡಿ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.



