ದಾವಣಗೆರೆ: ಭದ್ರಾ ಜಲಾಶಯದಿಂದ ತುಂಗಭದ್ರಾ ಜಲಾಶಯಕ್ಕೆ 7ಟಿಎಂಸಿ ನೀರು ಹರಿಸುವುದನ್ನು ವಿರೋಧಿಸಿ ಭಾರತೀಯ ರೈತ ಒಕ್ಕೂಟದಿಂದ ಇಂದು ಪ್ರತಿಭಟನೆ ನಡೆಸಲಾಯಿತು.
ನಗರದ ಪಿ.ಬಿ. ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎಚ್.ಆರ್. ಲಿಂಗರಾಜ್ ಶಾಮನೂರು, ತುಂಗಭದ್ರಾ ಜಲಾಶಯ ಭಾಗದ ಶಾಸಕರು, ಸಂಸದರು, ಜನ ಪ್ರತಿನಿಧಿಗಳು ತುಂಗಭದ್ರಾ ಜಲಾಶಯಕ್ಕೆ 7 ಟಿಎಂಸಿ ನೀರು ಹರಿಸಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಸರ್ಕಾರದ ಮೂಲಕ ನೀರು ಹರಿಸುವ ಆದೇಶ ಹೊರಡಿಸಲು ಇನ್ನಿಲ್ಲದ ಒತ್ತಾಯ ತರುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮತಗಳ ಪಡೆಯಲು ಈ ಗಿಮಿಕ್ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಭದ್ರಾದಲ್ಲಿ ನೀರು 168 ಅಡಿ ಇದ್ದು, ಈಗ ರೈತರು ಭತ್ತ ನಾಟಿ ಮಾಡುತ್ತಿದ್ದಾರೆ. ಜಲಾಶಯದಲ್ಲಿ ಈಗ ಇರುವ ನೀರು, ಬೇಸಿಗೆ ಬೆಳೆಗೆ ಮಾತ್ರ ಸರಿ ಹೊಂದುತ್ತದೆ. ಇನ್ನೊಂದು ಕಡೆ ಭದ್ರಾ ಮೇಲ್ದೆಂಡೆ ಯೋಜನೆಗೆ ನೀರು ಕೇಳುತ್ತಾರೆ. ನಮಗೆ ಸಂಬಂಧವಿಲ್ಲದ ತುಂಗಾಭದ್ರದವರು ಬೆಳೆಗೆ 7 ಟಿ.ಎಂ.ಸಿ ನೀರು ಕೇಳುತ್ತಾರೆ.ಅವರಿಗೆ ನೀರು ಕೊಟ್ಟರೆ ನಾವು ಬೆಳೆ ನಷ್ಟ ಅನುಭವಿಸಬೇಕಾಗುತ್ತದೆ. ಈ ವಿಚಾರದಲ್ಲಿ ಸರ್ಕಾರ ರಾಜಕಾರಣ ಮಾಡಿದರೆ ಮುಂದೆ ಆಗುವ ಅನಾಹುತಕ್ಕೆ ಜನಪ್ರತಿನಿಧಿಗಳೇ ಹೊಣಿ ಎಂದು ಎಚ್ಚರಿಸಿದರು.
ನಮ್ಮ ಜಿಲ್ಲೆಯ ಶಾಸಕರು, ಲೋಕಾಸಭಾ ಸದಸ್ಯರು ಎಲ್ಲರೂ ಪಕ್ಷಭೇದ ಮರೆತು ರೈತರ ಹಿತದೃಷ್ಟಿಯಿಂದ ಸರ್ಕಾರಕ್ಕೆ ಒತ್ತಾಯಿಸಿ, ಭದ್ರಾ ಡ್ಯಾಂ ನಿಂದ ಒಂದು ಹನಿ ನೀರು ಬಿಡದಂತೆ ನೋಡಿಕೊಳ್ಳಬೇಕು. ಭದ್ರಾದ ಮೇಲೆಯೇ ಈಗ ಎಲ್ಲರ ಕಣ್ಣು ಬಿದ್ದಿದೆ. ಹಿಂದೆ ಭದ್ರಾದತ್ತ ಯಾರೂ ತಲೆ ಹಾಕುತ್ತಿರಲಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ಇತರೆಡೆ ನೀರು ತೆಗೆದುಕೊಂಡು ಹೋಗಲಾಗುತ್ತಿದೆ. ಇದೇ ರೀತಿಯಲ್ಲಿ ನೀರು ಹರಿಸುತ್ತಾ ಹೋದರೆ ಅಚ್ಚುಕಟ್ಟುದಾರರ ಸ್ಥಿತಿ ಅಭದ್ರವಾಗಲಿದೆ ಎಂದು ಎಚ್ಚರಿಸಿದರು.



