ದಾವಣಗೆರೆ: ರಾಜ್ಯದಲ್ಲಿ ಬಿಜೆಪಿ ದುರಾಡಳಿತಕ್ಕೆ ಜನರು ಬೇಸತ್ತಿದ್ದು, ಕಾಂಗ್ರೆಸ್ ಪಕ್ಷದ ಗಾಳಿ ಬೀಸುತ್ತಿದೆ. ನಾಳೆಯೇ ಚುನಾವಣೆ ನಡೆದ್ರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.
ನಗರದ ಹೈಸ್ಕೂಲ್ ಮೈದಾನದಲ್ಲಿ ಜ.19 ರಂದು ನಡೆಯುವ ಪ್ರಜಾಧ್ವನಿ ಬಸ್ ಯಾತ್ರೆ ಸಮಾರಂಭ ಪೂರ್ವ ಸಿದ್ಧತೆ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಆಡಳಿತದಲ್ಲಿ ದಿನಕ್ಕೊಂದು ಶಾಸಕರ ಹಗರಣಗಳು ಬಯಲಿಗೆ ಬರುತ್ತಿವೆ.ಈ ಸರಕಾರದಲ್ಲಿ ಕಮಿಷನ್ ದಂಧೆ ಜಾಸ್ತಿಯಾಗಿದೆ. ಸ್ಯಾಂಟ್ರೋ ರವಿ ಪ್ರಕರಣ, ಪಿಎಸ್ಐ ಹಗರಣ, ಬೆಲೆ ಏರಿಕೆ, 2 ಕೋಟಿ ಉದ್ಯೋಗ ನೀಡುವ ಅಮಿಷ, ಕೋವಿಡ್ ಸಮಯದಲ್ಲಿ ಜನರ ಲೂಟಿ, ಹೀಗೆ ಹಲವಾರು ಭ್ರಷ್ಟಚಾರದಲ್ಲಿ ಮುಳುಗಿರುವ ಸರಕಾರ ಅಭಿವೃದ್ಧಿ ಶೂನ್ಯವಾಗಿದೆ. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಗಾಳಿ ಬೀಸುತ್ತಿದೆ ಎಂದರು.
ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ ಭಾಗದಲ್ಲಿ ಕಾಂಗ್ರೆಸ್ಗೆ ರಾಜ್ಯದಲ್ಲಿ ಅತಿ ಹೆಚ್ಚು ದಾಖಲೆಯ ಮತಗಳು ಬರಲಿವೆ. ಅಕಾಂಕ್ಷಿಗಳು ಎಷ್ಟೇ ಬರಲಿ. ಇದಕ್ಕೆ ಪಕ್ಷದ ಕೆಲ ಮಾನದಂಡ ಇವೆ. ಅದರಂತೆ ಪಕ್ಷ ಸರ್ವೇ ಮಾಡಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೇಟ್ ನೀಡಲಿದೆ. ಫೆಬ್ರವರಿ ಮೊದಲ ಅಥವಾ ಎರಡನೇ ವಾರದಲ್ಲಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ ಎಂದರು.
ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಮಾತನಾಡಿ, ಪಕ್ಷದ ಎಲ್ಲ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ನಗರದ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಪ್ರಜಾಧ್ವನಿ ಯಾತ್ರೆ ಯಶಸ್ವಿಗೊಳಿಸಬೇಕು. 40% ಬಿಜೆಪಿ ಸರ್ಕಾರದ ಆಡಳಿವನ್ನು ಜನರು ಪ್ರತಿ ದಿನ ನೋಡುತ್ತಿದ್ದಾರೆ. ಸರ್ಕಾರದ ವಿರುದ್ಧ ಆರೋಪ ಮಾಡಿದ ಗುತ್ತಿಗೆದಾರ ಸಂಘದ ಅಧ್ಯಕ್ಷರನ್ನು ಜೈಲಿಗೆ ಹಾಕ್ತಿವೆ ಎಂದು ಎದುರಿಸುತ್ತಿದ್ದಾರೆ. ಇಂತಹ ಭ್ರಷ್ಟ ಸರ್ಕಾರ ತೊಲಗಿಸಲು ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ, ಶಾಸಕ ರಾಮಪ್ಪ, ಮಾಜಿ ಶಾಸಕರಾದ ಶಾಂತನಗೌಡ, ಹೆಚ್.ಪಿ.ರಾಜೇಶ್, ತೇಜಸ್ವಿ ಪಟೇಲ್, ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಕೆ ಶೆಟ್ಟಿ, ಎಸ್.ಮಲ್ಲಿಕಾರ್ಜುನ್, ಆಯೂಬ್ ಪೈಲ್ವಾನ್, ಬಸವಂತಪ್ಪ, ನಿಖಿಲ್ ಕೊಂಡಜ್ಜಿ, ಶಾಮನೂರು ಬಸವರಾಜ್, ಪಾಲಿಕೆ ವಿಪಕ್ಷ ನಾಯಕ ಮಂಜುನಾಥ ಗಡಿಗುಡಾಳ್, ಕೆ.ಜಿ.ಶಿವಕುಮಾರ್, ಪರಶುರಾಮ್, ಮುದೇಗೌಡ್ರ ಗೀರೀಶ್ ಸೇರಿದಂತೆ ಇತರರು ಇದ್ದರು.



