ದಾವಣಗೆರೆ: ಕನ್ನಡ ರಾಜ್ಯೋತ್ಸವ ಕನ್ನಡಿಗರ ಹಬ್ಬ. ನಾಡು-ನುಡಿಯ ಹಿರಿಮೆ-ಗರಿಮೆಗಳನ್ನು ಮನನ ಮಾಡಿಕೊಳ್ಳುವ ಸಾಂಸ್ಕೃತಿಕ ಪರೀಕ್ಷೆ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ 67 ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಅವರು ಸಂದೇಶ ನೀಡಿದರು.
ಕರ್ನಾಟಕ ರಾಜ್ಯ ಉದಯವಾಗಿ 66 ವರ್ಷಗಳಾಗಿರುವ ಈ ಸಂದರ್ಭದಲ್ಲಿ ನಮ್ಮ “ನಾಡಿನ ಜೀವನ್ಮುಖಿ ಪಯಣ ಎತ್ತ ಸಾಗಿದೆ” ಎಂಬುದರ ಕುರಿತು ಚಿಂತನೆ ನಡೆಸಲು ಅತ್ಯಂತ ಸೂಕ್ತವಾದ ಮತ್ತು ವರ್ತಮಾನದ ವಿಶೇಷ ಸಾಧನೆಗಳೊಂದಿಗೆ ನಮ್ಮ ಶ್ರೇಷ್ಠವಾದ ಇತಿಹಾಸವನ್ನು ನಮ್ಮ ಮುಂದಿನ ಪೀಳಿಗೆಗೆ ಮನನ ಮಾಡಿಕೊಡುವ ಮೂಲಕ ಅವರಲ್ಲಿ ನಾಡು-ನುಡಿಯ ಕುರಿತು ಜಾಗೃತಿ, ಅರಿವು ಮೂಡಿಸಲು ಇದು ಅತ್ಯಂತ ಪ್ರಶಸ್ತ್ಯವಾದ ದಿನವಾಗಿದೆ ಎಂದರು.
ಕನ್ನಡ ಭಾಷೆ, ಕರ್ನಾಟಕದ ಉಗಮದ ಇತಿಹಾಸದತ್ತ ಕಣ್ಣಾಯಿಸಿದರೆ ಕನ್ನಡಿಗರದು ಸುಮಾರು ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸವೆಂಬುದು ನಮಗೆ ವೇದ್ಯವಾಗುತ್ತದೆ. ಇಂತಹ ಭವ್ಯ ಇತಿಹಾಸ, ಪರಂಪರೆ, ಸಂಸ್ಕೃತಿ ಹೊಂದಿದ್ದಂತಹ ಕನ್ನಡನಾಡು ಬ್ರಿಟಿಷರ ಕಾಲಾವಧಿಯಲ್ಲಿ, ಅವರ ಚಿತಾವಣೆಯಿಂದಾಗಿ ಮೈಸೂರು ಪ್ರಾಂತ್ಯ, ಬಾಂಬೆ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಮತ್ತು ಮದ್ರಾಸ್ ಕರ್ನಾಟಕ ಎಂದು ಹಲವು ಪ್ರಾಂತ್ಯಗಳಲ್ಲಿ, ಪಾಳೆಯ ಪಟ್ಟುಗಳಲ್ಲಿ ಹಂಚಿಹೋಗಿತ್ತು. ಸ್ವಾತ್ರಂತ್ಯದ ನಂತರ ರಾಜ್ಯದ ಏಕೀಕರಣ ಪ್ರಕ್ರಿಯೆ ಪ್ರಾರಂಭವಾಗಿ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣರಾಯರು,
ಬಿ.ಎಂ.ಶ್ರೀ, ಕುವೆಂಪು, ಬೇಂದ್ರೆ, ರಾಜರತ್ನಂ ಹೀಗೆ ನೂರಾರು ಕವಿಪುಂಗವರು, ತಮ್ಮ ಕವಿತೆ, ಬರಹಗಳ ಮೂಲಕ ಕನ್ನಡಿಗರೆಲ್ಲರೂ ಒಂದಾಗಬೇಕೆಂಬ ಕೆಚ್ಚನ್ನು ಹೆಚ್ಚಿಸಿದರು.
ನೂರಾರು ಕಲಾವಿದರು, ಜನಪ್ರತಿನಿಧಿಗಳು, ಪತ್ರಿಕೆಗಳು-ಪತ್ರಕರ್ತರು, ಕರ್ನಾಟಕದ ಏಕೀಕರಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ, ಜೊತೆಗೆ ಜನಸಮುದಾಯದ ಪರಿಶ್ರಮ ಮತ್ತು ತ್ಯಾಗದ ಪ್ರತಿಫಲವಾಗಿ ಕನ್ನಡನಾಡು ಏಕೀಕೃತಗೊಂಡು, 67ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ನಮ್ಮ ರಾಜ್ಯದ ಶ್ರೇಷ್ಠವಾದ ಸಂಸ್ಕೃತಿ, ಪರಂಪರೆ, ಇತಿಹಾಸವನ್ನು ಅವಲೋಕಿಸಿದರೆ, ಈ 66 ವರ್ಷಗಳಲ್ಲಿ ಸಂಸ್ಕೃತಿ, ಸಾಹಿತ್ಯ, ಶಿಕ್ಷಣ, ರಾಜಕೀಯ, ವಿಜ್ಞಾನ, ಮಾನವಿಕ, ಲಲಿತಕಲೆ, ಜಾನಪದ, ಕೃಷಿ-ನೀರಾವರಿ, ಪ್ರವಾಸೋದ್ಯಮ, ತಂತ್ರಜ್ಞಾನ ಹೀಗೆ ಹಲವು ಕ್ಷೇತ್ರಗಳಲ್ಲಿ ಮಹತ್ತರ ಬೆಳವಣಿಗೆಗಳಾಗಿರುವುದು ಕಂಡುಬರುತ್ತದೆ. ಕನ್ನಡ ಭಾಷೆ, ಸಂಸ್ಕøತಿಯ ರಕ್ಷಣೆಗೆ ನೈತಿಕ ಶಕ್ತಿಯನ್ನು ತುಂಬಿ ಕರ್ತವ್ಯ ನಿರ್ವಹಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಿರುವ ರಾಜ್ಯ ನಮ್ಮದು ಎಂದು ತಿಳಿಸಿದರು.
ಆಕರ್ಷಕ ಪಥ ಸಂಚಲನ: ಒಟ್ಟು 12 ತಂಡಗಳು ಶಿಸ್ತಿನ ಮತ್ತು ಆಕರ್ಷಕ ಪಥ ಸಂಚಲನದಲ್ಲಿ ಪಾಲ್ಗೊಂಡವು. ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಗೃಹರಕ್ಷಕ ದಳ, ಅಗ್ನಿಶಾಮಕ ದಳ, ಅರಣ್ಯ ರಕ್ಷಕದಳದ ತಂಡಗಳು ಆಕರ್ಷಕ ಪಥಸಂಚಲನ ನಡೆಸಿದರು. ಡಿಎಆರ್ನ ಬ್ಯಾಂಡ್ ಮಾಸ್ಟರ್ ಹೊನ್ನೂರಪ್ಪ ವಾದ್ಯ ತಂಡದಿಂದ ರಾಷ್ಟ್ರಗೀತೆ ಸಹಿತ, ಶುಶ್ರಾವ್ಯ ವಾದ್ಯ ಪ್ರಸ್ತುತಪಡಿಸಿದರು. ಪಥ ಸಂಚಲನಕ್ಕೂ ಮುನ್ನ ತೆರೆದ ಜೀಪ್ನಲ್ಲಿ ತೆರಳಿದ ಜಿಲ್ಲಾ ಉಸ್ತುವಾರಿ ಸಚಿವರು, ಗೌರವ ವಂದನೆ ಸ್ವೀಕರಿಸಿದರು.
ಸಾಧಕರಿಗೆ ಸನ್ಮಾನ ಕಾರ್ಯಕ್ರಮ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಆಯ್ಕೆ ಮಾಡಿದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 51 ಗಣ್ಯರನ್ನು ಇದೇ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ಸರ್ಕಾರದ ಆದೇಶದಂತೆ ಸನ್ಮಾನಿತರಿಗೆ, ಗಣ್ಯರಿಗೆ ಹೂವು, ಹಾರ, ಸ್ಮರಣಿಕೆ ವಿತರಣೆಗೆ ನಿರ್ಬಂಧ ವಿಧಿಸಿ, ಪುಸ್ತಕಗಳನ್ನು ವಿತರಿಸಲಾಯಿತು.
ಕಣ್ಮನ ಸಳೆದ ಸಾಂಸ್ಕೃತಿಕ ನೃತ್ಯ: ನಗರದ ವಿಶ್ವ ಚೇತನ ಸ್ಕೂಲ್, ಸೆಂಟ್ ಫಾಲ್ಸ್ ಸ್ಕೂಲ್ ಹಾಗೂ ಗುರುಕುಲ ಶಾಲೆಯ ವಿದ್ಯಾರ್ಥಿಗಳು ಕನ್ನಡ ರಾಜ್ಯೋತ್ಸವದ ಹಾಡುಗಳಿಗೆ ಹೆಜ್ಜೆ ಹಾಕಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ರಾಜ್ಯೋತ್ಸವ ಸಮಾರಂಭಕ್ಕೂ ಮುನ್ನ, ಬೆಳಿಗ್ಗೆ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು, ಕನ್ನಡತಾಯಿ ಭುವನೇಶ್ವರಿ ಮೂರ್ತಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಲಾ ತಂಡಗಳ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಚನ್ನಪ್ಪ, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ಹಲವು ಗಣ್ಯರು ಭುವನೇಶ್ವರಿಗೆ ಹೂಮಳೆ ಸುರಿದು, ನಮನ ಸಲ್ಲಿಸಿದರು. ಭವ್ಯ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಪಾಲ್ಗೊಂಡಿದ್ದವು. ಮರೆವಣಿಗೆಯು ಹೈಸ್ಕೂಲ್ ಮೈದಾನದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಸಾಗಿಬಂದಿತು.
ಸಮಾರಂಭದಲ್ಲಿ ದಾವಣಗೆರೆ ಉತ್ತರ ಕ್ಷೇತ್ರ ಶಾಸಕ ಎಸ್.ಎ. ರವೀಂದ್ರನಾಥ್, ದಾವಣಗೆರೆ ಮಹಾನಗರಪಾಲಿಕೆ ಯ ಮಹಾಪೌರರದ ಜಯಮ್ಮ ಗೋಪಿನಾಯ್ಕ್, ಧೂಡಾ ಅಧ್ಯಕ್ಷ ಕೆ.ಎಂ ಸುರೇಶ್, ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರಾದ ಬಸವರಾಜ್ ನಾಯ್ಕ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಪೊಲೀಸ್ ಇಲಾಖೆಯ ಪೂರ್ವ ವಲಯ ಐಜಿಪಿ ತ್ಯಾಗರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಚನ್ನಪ್ಪ, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ವಿವಿಧ ಗಣ್ಯರು, ಅಧಿಕಾರಿಗಳು, ಹಲವು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಕನ್ನಡಪ್ರೇಮಿಗಳು ಭಾಗವಹಿಸಿದ್ದರು.