ಡಿವಿಜಿ ಸುದ್ದಿ, ದಾವಣಗೆರೆ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದ ಮುಸ್ಲಿಂ ಮುಖಂಡರು ದಾವಣಗೆರೆಯ ಅಜಾದ್ ನಗರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ನಮಾಜ್ ಮಾಡಿ ಪ್ರತಿಭಟನೆ ಮಾಡಿದರು. ಪ್ರತಿಭಟನಾಕಾರರನ್ನು ಮನವೊಲಿಸಲು ಎಸ್ಪಿ ಹಾಗೂ ಜಿಲ್ಲಾಧಿಕಾರಿಗಳು ರಾಷ್ಟ್ರಗೀತೆಯನ್ನು ಹಾಡಿದರು. ಆಗ ಮುಸ್ಲಿಂ ಮುಖಂಡರು ರಾಷ್ಟ್ರ ಗೀತೆಗೆ ಧ್ವನಿಗೂಡಿಸಿದರು.
ಮುಸ್ಲಿಂ ಸಂಘಟನೆ ಹಾಗೂ ಮುಖಂಡರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನಾ ಹಮ್ಮಿಕೊಳ್ಳಲು ಅನುಮತಿ ಪಡೆಯಲು ಬಂದಿದ್ದರು. ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ ಇರುವ ಹಿನ್ನೆಲೆ ಯಾವುದೇ ಕಾರಣಕ್ಕೂ ಪ್ರತಿಭಟನೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ಪೊಲೀಸರು ಹೇಳಿದರು.

ಇದನ್ನು ವಿರೋಧಿಸಿದ ಮುಸ್ಲಿಂ ಮುಖಂಡರು ಅನುಮತಿ ನೀಡಬೇಕೆಂದು ಪಟ್ಟು ಹಿಡಿದರು. ಠಾಣೆಯ ಮುಂದೆಯೇ ನಮಾಜ್ ಮಾಡಲು ಮುಂದಾದರು. ಆಗ ಪೊಲೀಸರು ಅವರಿಗೆ ಚಾಪೆಗಳನ್ನು ನೀಡಿ ನಮಾಜ್ ಮಾಡಲು ಸಹಕರಿದರು.
ನಮಾಜ್ ಬಳಿಕ ಎಸ್.ಪಿ ಹನುಮಂತರಾಯ ಅವರು ಮುಸ್ಲಿಂ ಮುಖಂಡರನ್ನು ಮನವೊಲಿಸಲು ಪ್ರಯತ್ನಿಸಿದರು. ಜಿಲ್ಲಾಧಿಕಾರಿಗಳೇ ಇಲ್ಲಿಗೆ ಬಂದು ನಿಮ್ಮ ಮನವಿಯನ್ನು ಸ್ವೀಕರಿಸುತ್ತಾರೆ ಎಂದು ಸಮಾಧಾನ ಪಡಿಸಲು ಮುಂದಾದರು. ಮುಸ್ಲಿಂ ಮುಖಂಡರು ಪಟ್ಟು ಸಡಿಲಿಸಲಿಲ್ಲ. ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರನ್ನು ಸಹ ಸುತ್ತುವರಿದರು. ಪ್ರತಿಭಟನಾಕಾರರನ್ನು ಸಮಾಧಾನ ಮಾಡಲು ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರು ರಾಷ್ಟ್ರಗೀತೆ ಹಾಡಿ ಮನವೊಲಿಸಿದರು.



