ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಬಳಕೆ ಮಾಡಿದ್ದ ಬೈಕ್ ಮೂಲ ಮಾಲೀಕ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ವ್ಯಕ್ತಿಗೆ ಸೇರಿದ್ದು ಎಂಬುದು ವಿಚಾರಣೆಯಲ್ಲಿ ಗೊತ್ತಾಗಿದೆ.
2017ರಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದ್ದ ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಕೋಕಾ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೆ.ಬೀರನಹಳ್ಳಿಯ ಬಿ.ಎಂ. ಗಿರೀಶ್ ಕಪ್ಪು ಬಣ್ಣದ ಹೀರೋ ಫ್ಯಾಷನ್ ಪ್ರೋ ಬೈಕ್ ತನ್ನದೇ ಎಂದಿದ್ದಾನೆ.
ಪತ್ನಿಗೆ ಆಸ್ಪತ್ರೆಗೆ ತೋರಿಸಲು 2016ರ ಅಕ್ಟೋಬರ್ 21ರಂದು ದಾವಣಗೆರೆ ನಗರದ ಆಸ್ಪತ್ರೆಯೊಂದರ ಪಾರ್ಕಿಂಗ್ನಲ್ಲಿ (ಕೆಎ 17, ಇಸಿ-9075) ಮಧ್ಯಾಹ್ನ 1.30ರ ಸಮಯದಲ್ಲಿ ಬೈಕ್ ನಿಲ್ಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಎಲ್ಲ ಕೆಲಸ ಮುಗಿಸಿ ರಾತ್ರಿ 8.30ಕ್ಕೆ ಹಿಂದಿರುಗಿದಾಗ ಬೈಕ್ ಇರಲಿಲ್ಲ. ಸುತ್ತಮುತ್ತಲ ಭಾಗಗಳಲ್ಲಿ ಹುಡುಕಿ ಹತ್ತಿರದ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಮುಂದಾದರೂ ಸ್ವೀಕರಿಸಲಿಲ್ಲ. ಬಳಿಕ 2016ರ ಡಿಸೆಂಬರ್ 4ರಂದು ದಾವಣಗೆರೆ ಪೊಲೀಸರಿಗೆ ದೂರು ದಾಖಲಿಸಿದ್ದೆ ಎಂಬುದಾಗಿ ವಿವರಿಸಿದರು.
ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಾಲಯ ವಿಚಾರಣೆ ಮುಂದೂಡಿತು. ಇದೇ ಬೈಕ್ ಅನ್ನು ಪ್ರಕರಣದ ಆರೋಪಿಗಳಾದ ಗಣೇಶ್ ಮಿಸ್ಕಿನ್ ಮತ್ತು ಪರಶುರಾಮ ವಾಗ್ಮೋರೆ ಗೌರಿ ಲಂಕೇಶ್ ಕೊಲೆ ಬಳಕೆ ಮಾಡಿಕೊಂಡಿದ್ದರು ಎಂಬುದು ವಿಚಾರಣೆಯಲ್ಲಿ ಗೊತ್ತಾಗಿದೆ.



