ದಾವಣಗೆರೆ: ಮಕ್ಕಳಿಗೆ ಹೆಚ್ಚು ಬೇಕರಿ ಆಹಾರ ಪದಾರ್ಥ ನೀಡದೇ, ಮನೆಯಲ್ಲಿಯೇ ತಯಾರಿಸಿದ ಆಹಾರವನ್ನು ನೀಡಿ ಆರೋಗ್ಯ ವೃದ್ಧಿಸಲು ಪೋಷಕರು ಆದ್ಯತೆ ನೀಡಬೇಕಿದೆ ಎಂದು ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿ ಡಾ. ದೇವರಾಜ ಟಿ.ಎನ್ ತಿಳಿಸಿದರು.
ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ ಹಾಗೂ ಇಫ್ಕೋ ಲಿ, ದಾವಣಗೆರೆ ಮತ್ತು ಸರ್ಕಾರಿ ಪ್ರೌಢಶಾಲೆ, ನಾಗನೂರು ಸಂಯುಕ್ತಾಶ್ರಯದಲ್ಲಿ ಪೋಷಣಾ ಅಭಿಯಾನ ಮತ್ತು ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದ ಜನತೆಗೆ ಪೌಷ್ಠಿಕತೆ ಬಗ್ಗೆ ಅರಿವು ಮೂಡಿಸಬೇಕಿದೆ. ಈ ಮೂಲಕ ಅಪೌಷ್ಠಿಕತೆಯನ್ನು ತಡೆಗಟ್ಟಲು ಸಾಧ್ಯ. ಇನ್ನೂ ಆಹಾರ ಕಲಬೆರಕೆಯ ಬಗ್ಗೆ ಜಾಗೃತರಾಗಿರಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಾಗನೂರು ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾದ್ಯಾಯ ಸೋಮಶೇಖರಪ್ಪ ಕೆ, ಮಕ್ಕಳು ಬಿಸಿಯೂಟ ಮತ್ತು ಕ್ಷೀರ ಭಾಗ್ಯದ ಉಪಯೋಗವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂದರು.
ಇಫ್ಕೋ ಲಿ ದಾವಣಗೆರೆಯ ಮಂಜುನಾಥ ಮಾತನಾಡಿ, ಹೆಚ್ಚಿನ ಹಣ್ಣು, ತರಕಾರಿಗಳನ್ನು ಸೇವಿಸುವುದರಿಂದ ಅಪೌಷ್ಠಿಕತೆಯನ್ನು ತಡೆಗಟ್ಟಬಹುದೆಂದರು. ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞರಾದ(ಕೃಷಿ ವಿಸ್ತರಣೆ) ರಘುರಾಜ ಜೆ ಮಾತನಾಡಿ ಪೌಷ್ಠಿಕ ಕೈ ತೋಟದ ಬಗ್ಗೆ ಮಾಹಿತಿ ನೀಡಿದರು.
ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞರಾದ(ಬೇಸಾಯ) ಮಲ್ಲಿಕಾರ್ಜುನ ಬಿ.ಓ ಇವರು ಮಾತನಾಡಿ ಸಿರಿಧಾನ್ಯಗಳ ಬಗ್ಗೆ ಮಕ್ಕಳಿಗೆ ಜಾಗೃತಿ ಮಾಡಿಸಿದರು, ಸಿರಿಧಾನ್ಯಗಳಲ್ಲಿ ಹೆಚ್ಚಿನ ಪೋಷಕಾಂಶಗಳಿಂದ ದಿನದ ಒಂದು ಊಟದಲ್ಲಿ ಸಿರಿಧಾನ್ಯಗಳನ್ನು ಸೇವಿಸಲು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಸುಪ್ರಿಯಾ ಪಿ ಪಾಟೀಲ್, ಮಕ್ಕಳಿಗೆ ಅಪೌಷ್ಠಿಕತೆ ಬಗ್ಗೆ ಮಾಹಿತಿ ನೀಡಿ, ಅಪೌಷ್ಠಿಕತೆಯನ್ನು ತಡೆಗಟ್ಟಲು ನಾವು ಸಮತೋಲನ ಆಹಾರ ಸೇವಿಸಬೇಕೆಂದರು ನಂತರ ಮಕ್ಕಳಿಗೆ ಆಹಾರದ ಗುಂಪುಗಳ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮದ ಅಂತ್ಯದಲ್ಲಿ ಶಾಲಾ ಮಕ್ಕಳಿಗೆ, ಪೋಷಕರಿಗೆ ಪೌಷ್ಠಿಕ ಕೈ ತೋಟದ ಬೀಜಗಳನ್ನು ವಿತರಿಸಲಾಯಿತು.
ಶಾಲಾ ಆವರಣದಲ್ಲಿ ಔಷಧಿಯ ಸಸ್ಯಗಳನ್ನು ನೆಡಲಾಯಿತು. ಈ ಕಾರ್ಯಕ್ರಮದಲ್ಲಿ ನಾಗನೂರು ಗ್ರಾಮ ಪಂಚಾಯಿತಿಯ ಸದಸ್ಯರುಗಳು, ಶಾಲಾಭಿವೃದ್ದಿ ಸಮಿತಿಯ ಸದಸ್ಯರುಗಳು, ಪೋಷಕರು, ಶಾಲಾ ಸಿಬ್ಬಂದಿಗಳು ಮತ್ತು ಶಾಲೆಯ ಮಕ್ಕಳು ಭಾಗವಹಿದ್ದರು. ನಂತರ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲೂ ಸಹ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.



