ಸಿರಿಗೆರೆ: ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘದ ನೂತನ ಅಧ್ಯಕ್ಷರಾಗಿ ಭದ್ರಾವತಿ ತಾಲ್ಲೂಕು ಹನುಮಂತಾಪುರದ ರೈತ ಹೋರಾಟಗಾರ ಎಚ್.ಆರ್.ಬಸವರಾಜಪ್ಪ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಡಾ. ಮೂಗಪ್ಪ ಕೊಟ್ಟೂರು ಆಯ್ಕೆಯಾಗಿದ್ದಾರೆ.
ಭಾನುವಾರ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮೀಜಿ ಹಾಗೂ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಾಧು ಸದ್ಧರ್ಮ ವೀರಶೈವ ಸಂಘದ ಸರ್ವಸದಸ್ಯರ ಸಭೆಯಲ್ಲಿ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿನಂದನೆ ಸಲ್ಲಿಸಿ ಆಶೀರ್ವಚನ ನೀಡಿದರು.
ನಮ್ಮ ಗುರುಪಿತಾಮಹರಾದ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮೀಜಿಯವರ ಕಾಲದಲ್ಲಿ 1922ರಲ್ಲಿ ಬೈಲಾ ರೂಪಿತವಾಗಿದೆ. ಅದನ್ನು ಅವರು 1923 ರಲ್ಲಿ ನೋಂದಣಿ ಮಾಡಿಸಿದ್ದಾರೆ. ನಮ್ಮ ಕಾಲದಲ್ಲಿ ಬೈಲಾ ತಿದ್ದುಪಡಿಯೇ ಆಗಿಲ್ಲ. ಸಾಧು ಸದ್ಧರ್ಮ ಸಂಘದ ಕೆಲವು ನಿಬಂಧನೆಗಳಿಗೆ ತಿದ್ದುಪಡಿ ತರುವ ಅವಶ್ಯಕತೆ ಇದ್ದು ಕೊರೋನಾ ವ್ಯಾಪಕವಾಗಿ ಹರಡಿದ ಹಿನ್ನೆಲೆಯಲ್ಲಿ ಆ ಕೆಲಸ ತಡವಾಗಿದ್ದು, ಸಂಘದ ವಿಶೇಷ ಸಭೆ ಕರೆದು ಅದಕ್ಕೆ ಚಾಲನೆ ನೀಡಬೇಕು ಎಂದು ತಿಳಿಸಿದರು.
ರಾಜ್ಯದ ವಿವಿಧ ಭಾಗದಲ್ಲಿ ಇರುವ ಸಾಧುಸದ್ಧರ್ಮ ವೀರಶೈವ ಸಂಘದ ಸಮುದಾಯವನ್ನು ಸಂಘಟಿಸುವ ಸಲುವಾಗಿ ತಾಲ್ಲೂಕು ಸಮಿತಿಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಇದರಿಂದ ಸಮಾಜದ ಜನರ ಒಗ್ಗೂಡುವಿಕೆಗೆ ಅನುಕೂಲವಾಗಿದೆ. ಈ ಸಂಬಂಧ ರಾಜ್ಯದ ವಿವಿಧ ತಾಲ್ಲೂಕು ಸಮಿತಿಯ ಅಧ್ಯಕ್ಷರುಗಳ ಸಂಘದವರೊಂದಿಗೆ ಶ್ರೀಗಳು ಚರ್ಚೆ ನಡೆಸಿದರು. ನಂತರ ಹರಪನಹಳ್ಳಿಯ ಮಂಜುನಾಥ್ ಬಸವರಾಜಪ್ಪ ಆಯ್ಕೆಯನ್ನು ಪ್ರಕಟಿಸಿದರು. ಈಗಾಗಲೇ ರಾಜ್ಯ ರೈತ ಸಂಘದ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆಯನ್ನು ಹೊತ್ತಿರುವ ಬಸವರಾಜಪ್ಪ ಅವರ ಹೆಗಲಿಗೆ ಸಾಧು ಸದ್ಧರ್ಮ ಸಂಘದ ಜವಾಬ್ದಾರಿ ನೀಡಲಾಗಿದೆ.
ನೂತನ ಅಧ್ಯಕ್ಷ ಬಸವರಾಜಪ್ಪ ಮಾತನಾಡಿ, ಸಂಘ ಸಂಸ್ಥೆಗಳೆಂದರೆ ಅಸಮಾಧಾನ ಸಾಮಾನ್ಯ. ಶ್ರೀಗಳು ವಿಚಲಿತರಾಗುವ ಅಗತ್ಯ ಇಲ್ಲ. ಕುಟುಂಬದ ಸಮಸ್ಯೆಗಳು ಎಂದು ತಿಳಿದು ತಾಳ್ಮೆಯಿಂದ ತಿಳಿಗೊಳಿಸೋಣ ಎಂದರು.ರಾಜ್ಯಸಭೆಯ ಮಾಜಿ ಸದಸ್ಯ ಕೆ.ಆರ್. ಜಯದೇವಪ್ಪನವರ ನಿಧನದ ನಂತರ ಪ್ರಭಾರೆ ಅಧ್ಯಕ್ಷನಾಗಿ ಕೆಲಸ ಮಾಡುವಂತ ಅವಕಾಶವನ್ನು ಸಮಾಜವು ತಮಗೆ ಕಲ್ಪಿಸಿಕೊಟ್ಟಿತ್ತು. ಆ ಜವಾಬ್ದಾರಿ ನಿರ್ವಹಿಸಿದ್ದೇನೆ. ಅದಕ್ಕೆ ಪೂಜ್ಯ ಶ್ರೀಗಳ ಪ್ರೇರಣೆ ಕಾರಣವಾಗಿತ್ತು ಎಂದು ಬಿ.ಎಲ್. ಶಿವಳ್ಳಿ ಹೇಳಿದರು.
ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಬಿ. ರಂಗನಾಥ್, ಆಡಳಿತಾಧಿಕಾರಿ ಡಾ ಎಚ್.ವಿ.ವಾಮದೇವಪ್ಪ, ಭರಮಸಾಗರ ಕೆರೆ ಹೋರಾಟ ಸಮಿತಿಯ ಚೌಲಿಹಳ್ಳಿ ಶಶಿ ಪಾಟೀಲ್, ಗ್ರಾ.ಪಂ ಅಧ್ಯಕ್ಷ ಎಂ.ಜಿ.ದೇವರಾಜ, ನಿವೃತ್ತ ಐ.ಎಫ್.ಎಸ್ ಅಧಿಕಾರಿ ನಾಗರಾಜ್ ಹಂಪೋಳ್, ದಾವಣಗೆರೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ. ವಾಮದೇವಪ್ಪ ಮುಂತಾದವರು ಇದ್ದರು. ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್. ಮರುಳಸಿದ್ಧಯ್ಯ ಸ್ವಾಗತಿಸಿದರು. ತಾಲ್ಲೂಕು ಸಮಿತಿ ಪದಾಧಿಕಾರಿಗಳು ಭಕ್ತರು ಭಾಗವಹಿಸಿದ್ದರು.



