ಜಗಳೂರು: ಭಾರೀ ಮಳೆಗೆ ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ 60 ಎಕರೆಗೂ ಅಧಿಕ ಅಡಿಕೆ ಬೆಳೆ ಸೇರಿ ವಿವಿಧ ಥೋಟಗಾರಿಕೆ ಬೆಳೆ ನಾಶವಾಗಿದ್ದು, ಶಾಸಕ ಎಸ್. ವಿ. ರಾಮಚಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲ್ಲೂಕಿನ ಬಿಳಿಚೋಡು ಹೋಬಳಿ ವ್ಯಾಪ್ತಿಯಲ್ಲಿ ಭಾರೀ ಮಳೆಗಾಳಿಯಿಂದಾಗಿ 60 ಎಕರೆಗೂ ಅಧಿಕ ತೋಟಗಾರಿಕೆ ಬೆಳೆಗಳು ನಾಶವಾಗಿದೆ. 14 ಮನೆಗಳಿಗೆ ಹಾನಿಯಾಗಿದೆ. ಬಿಳಿಚೋಡು ಹೋಬಳಿ ವ್ಯಾಪ್ತಿಯ ಬಿಳಿಚೋಡು, ಚಿಕ್ಕಅರಕೆರೆ, ಹಾಲೇಕಲ್ಲು, ಕೊಡದಗುಡ್ಡ, ಹೊಸಕೆರೆ, ಮಾಚಿಕೆರೆ, ಗುಡ್ಡದನಿಂಗನಹಳ್ಳಿ ಸೇರಿದಂತೆ 21 ಹಳ್ಳಿಗಳಲ್ಲಿ ತೋಟಗಳಿಗೆ ಹಾನಿಯಾಗಿದೆ.
ತೋಟಗಾರಿಕೆ ಬೆಳೆಗಳಾದ ಅಡಿಕೆ, ನುಗ್ಗೆ, ಬಾಳೆ, ಎಲೆಬಳ್ಳಿ ತೋಟ, ಹಲಸು, ಮಾವು, ಹಾಗೂ ತೆಂಗಿನ ಮರಗಳು ಸೇರಿ 67 ಎಕರೆ ಪ್ರದೇಶದಲ್ಲಿ ರೂ 50 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ. ಚಿಕ್ಕಬನ್ನಿಹಟ್ಟಿ,ಕೊರಟಿಕೆರೆ, ಚಿಕ್ಕಅರಕೆರೆ,ಮೆದಿಕೆರೇನಹಳ್ಳಿ ಪಾಲನಾಯಕನ ಕೋಟೆ. ಐನಹಳ್ಳಿ ಸೇರಿ 14 ಹಳ್ಳಿ ಗಳಲ್ಲಿ 20 ಮನೆಗಳು ಕುಸಿದಿದ್ದು, 7 ಲಕ್ಷಕ್ಕೂ ಹೆಚ್ಚುನಷ್ಟವಾಗಿದೆ. ಮಳೆಗಾಳಿಯಿಂದ ಬೆಳೆಹಾನಿಯಾಗಿರುವ ಗುಡ್ಡದನಿಂಗನಹಳ್ಳಿ, ಐನಹಳ್ಳಿ ಮುಂತಾದ ಗ್ರಾಮದ ತೋಟಗಳಿಗೆ ಜಗಳೂರಿನ ಶಾಸಕ ಎಸ್.ವಿ.ರಾಮಚಂದ್ರ ಹಾಗೂ ತಹಶಿಲ್ದಾರ್ ಸಂತೋಷ್ ಕುಮಾರ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ ಮೂರ್ತಿ ಭೇಟಿ ನೀಡಿ ಪರಿಶೀಲಿಸಿದರು.



