ಶಿವಮೊಗ್ಗ: ಜಲಾಶಯದಿಂದ ಅಚ್ಚುಕಟ್ಟಿನ ಬೇಸಿಗೆ ಬೆಳೆಗೆ 120 ದಿನ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಿದೆ. ಇಂದಿನಿಂದ (ಡಿ.29) ಎಡದಂಡೆ ನಾಲೆಗೆ, ಡಿ.30ರಂದು ಬಲದಂಡೆ ನಾಲಿಗೆ ನೀರು ಬಿಡಲು ಕ್ರಮ ತೀರ್ಮಾನಿಸಲಾಗಿದೆ.
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿದ ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ, ಡಿ.29ರ ಮಧ್ಯ ರಾತ್ರಿಯಿಂದ ಎಡದಂಡೆ ನಾಲೆಗೆ ಪೂರ್ಣ ಪ್ರಮಾಣದಲ್ಲಿ 350 ಕ್ಯೂಸೆಕ್ ಮತ್ತು ಡಿ.30ರಿಂದ ಬಲದಂಡೆ ನಾಲೆಗೆ ಮೊದಲ ಹತ್ತು ದಿನ 1,500 ಕ್ಯೂಸೆಕ್, ನಂತರದ ದಿನಗಳಲ್ಲಿ 3 ಸಾವಿರ ಕ್ಯೂಸೆಕ್ನಂತೆ ಸತತ 120 ದಿನ ನೀರು ಹರಿಸಲಾಗುವುದು ಎಂದರು.
ಇಂಜಿನಿಯರ್ಗಳ ಕೆಲಸ ನಾನು ಮಾಡುತ್ತಿದ್ದೇನೆ. ಬಹಳಷ್ಟು ಇಂಜಿನಿಯರ್ಗಳು ಕಾಮಗಾರಿ ಸ್ಥಳ ಪರಿಶೀಲನೆ ಮಾಡುವುದೇ ಇಲ್ಲ ಎಂದು ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಬೇಸರ ವ್ಯಕ್ತಪಡಿಸಿದರು. ಅಧಿಕಾರಿಗಳು ಅಚ್ಚುಕಟ್ಟು ಪ್ರದೇಶದ ರೈತರಿಗೆ ಸ್ಪಂದಿಸಬೇಕು.
ವಿದ್ಯುತ್ ಎಲ್ಸಿ ಮಾದರಿಯಂತೆ ಭದ್ರಾ ಅಚ್ಚುಕಟ್ಟು ಪ್ರದೇಶದ ಮುಖ್ಯ ಕಾಲುವೆಗಳಲ್ಲಿ ಎರಡ್ಮೂರು ಕಡೆ ಗೇಟ್ ಅಳವಡಿಸುವುದು ಸೂಕ್ತ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಸಲಹೆ ನೀಡಿದರು.
ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಮಾರ್ಚ್ವರೆಗೆ ನೀರು ಹರಿಸುವ ತೀರ್ಮಾನ ಕೈಗೊಂಡಿದ್ದಾರೆ. ಬೇಸಿಗೆಯಲ್ಲಿ ತುಂಗಾ ಮೇಲ್ದಂಡೆ ಅಚ್ಚುಕಟ್ಟು ರೈತರು ಮತ್ತು ಭದ್ರಾ ಅಚ್ಚುಕಟ್ಟು ರೈತರ ನಡುವೆ ಸಂಘರ್ಷ ಉಂಟಾಗಬಹುದು. ಹಾಗಾಗಿ ತುಂಗಾ ಮೇಲ್ದಂಡೆ ಯೋಜನೆಗೆ ತುಂಗಾದಿಂದ 17.5 ಟಿಎಂಸಿ ಮತ್ತು ಭದ್ರಾ ಅಣೆಕಟ್ಟಿನಿಂದ 12.4 ಟಿಎಂಸಿ ಒದಗಿಸುವ ಬದಲಾಗಿ ಸಂಪೂರ್ಣ 29.9 ಟಿಎಂಸಿ ನೀರನ್ನು ತುಂಗಾದಿಂದಲೇ ಒದಗಿಸುವಂತೆ ಡಿಪಿಆರ್ ಸಿದ್ಧಪಡಿಸಲು ಸರ್ಕಾರಕ್ಕೆ ಒತ್ತಾಯಿಸಬೇಕಿದೆ ಎಂದು ಹೇಳಿದರು.
ನೀರು ಬಳಕೆದಾರರ ಒಕ್ಕೂಟದ ಅಧ್ಯಕ್ಷ ತೇಜಸ್ವಿ ಪಟೇಲ್, ಎಡದಂತೆ ನಾಲೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ಜಿ.ರಘುನಾಥ್, ಅಧೀಕ್ಷಕ ಇಂಜಿನಿಯರ್ ಎಂ. ಚಂದ್ರಹಾಸ್, ಭದ್ರಾ ಕಾಡಾ ನಿರ್ದೇಶಕರಾದ ರುದ್ರಮೂರ್ತಿ, ವಿನಾಯಕ್, ಹನುಮಂತಪ್ಪ, ಸದಾಶಿವಪ್ಪ ಗೌಡ, ರಾಜಪ್ಪ, ರೈತ ಮುಖಂಡರಾದ ವೈ.ಜಿ. ಮಲ್ಲಿಕಾರ್ಜುನ, ಯಶವಂತರಾವ್, ರಾಮಪ್ಪ, ಹನುಮಂತಪ್ಪ, ಶೇಖರಪ್ಪ, ಇತರೆ ನಾಲೆಗಳ ಸದಸ್ಯರಾದ ವೈ. ದ್ಯಾಮಪ್ಪ ರೆಡ್ಡಿ, ಪರಮೇಶ ಗೌಡ, ಅಡಳಿತಾಧಿಕಾರಿ ಕೆ.ಪಿ. ಅರುಣ್ ಭದ್ರಾ ಯೋಜನಾ ವೃತ್ತದ ಇಇ ರವಿಚಂದ್ರ, ಎಇಇಗಳಾದ ಪ್ರಸನ್ನ, ವೆಂಕಟೇಶ್ ಇತರರಿದ್ದರು.



