ದಾವಣಗೆರೆ: ಠೇವಣಿದಾರ ಹಿತ ಕಾಯುವುದು ಕೇಂದ್ರ ಸರ್ಕಾರದ ನಿಲುವಾಗಿದ್ದು ಅದರಲ್ಲಿಯೂ ಬಡ ಮಧ್ಯಮ ವರ್ಗದವರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಕೌಶಲಾಭಿವೃದ್ದಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಡೆಪಾಸಿಟ್ ಇನ್ಸೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ತಿದ್ದುಪಡಿ) ಕಾಯ್ದೆ 2021 ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬ್ಯಾಂಕಿಂಗ್ ವಲಯದಲ್ಲಿ ಗ್ರಾಹಕರೇ ಅತಿಮುಖ್ಯ. ಸ್ಟೇಕ್ ಹೋಲ್ಡರ್ ಗಳು ಗ್ರಾಹಕರ ಹಿತ ಕಾಪಾಡಲು 2014 ರಲ್ಲಿ 1 ಲಕ್ಷ ಹಣಕ್ಕೆ ವಿಮೆ ಗ್ಯಾರಂಟಿ ನೀಡಲಾಯಿತು. ಇದೀಗ ಈ ಮೊತ್ತ 5 ಲಕ್ಷ ಹಣಕ್ಕೆ ವಿಮೆ ಗ್ಯಾರಂಟಿ ನೀಡುವುದರೊಂದಿಗೆ ಬಡ ಹಾಗೂ ಮಧ್ಯಮ ವರ್ಗದವರ ಹಣಕ್ಕೆ ಸರ್ಕಾರ ಗ್ಯಾರಂಟಿ ನೀಡುತ್ತಿದೆ ಎಂದರು.
ಕೆಲ ಸಂದರ್ಭಗಳಲ್ಲಿ ಬ್ಯಾಂಕ್ ಗಳ ಅಸಮರ್ಪಕ ನಿರ್ವಹಣೆಯಿಂದ ಮುಚ್ಚಲ್ಪಟ್ಟಾಗ ಬಹಳಷ್ಟು ಬಡ ಮಧ್ಯಮ ವರ್ಗದವರು ತಮ್ಮ ಜೀವನದ ಅವಶ್ಯಕತೆಗಳಾದ ಮನೆ ಕಟ್ಟುವುದು. ಮಕ್ಕಳ ಮದುವೆ ಮುಂತಾದ ಉದ್ದೇಶಗಳಿಗೆ ಇಟ್ಟಿದ್ದ ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುತ್ತಾರೆ. ಆದರೆ ಸರ್ಕಾರದ ಈ ಕ್ರಮದಿಂದಾಗಿ ಗ್ರಾಹಕರು ನಿರಾಳರಾಗುತ್ತಾರೆಂದರು.
ಸಂಸದ ಜಿ ಎಂ ಸಿದ್ಧೇಶ್ವರ ಮಾತನಾಡಿ ಈ ಹಿಂದೆ ಬ್ಯಾಂಕ್ ಗ್ರಾಹಕರು ತಾವು ಇಟ್ಟ ಹಣ ವ್ಯತ್ಯಯವಾದರೆ ಆತಂಕಕ್ಕೊಳಗಾಗುತ್ತಿದ್ದರು ಪ್ರಧಾನಿ ನರೇಂದ್ರ ಮೋದಿ ಯವರ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂಬಂತೆ ಯಾವೊಬ್ಬ ಬ್ಯಾಂಕ್ ಗ್ರಾಹಕರು ತೊಂದರೆಗೆ ಸಿಲುಕಬಾರದೆಂದು 5 ಲಕ್ಷ ದ ವರೆಗಿನ ಹಣಕ್ಕೆ ವಿಮೆ ಸಿಗುವಂತೆ ಮಾಡಿದ್ದಾರೆಂದರು.
ದಾವಣಗೆರೆ ಮಿಲ್ಲತ್ ಬ್ಯಾಂಕ್ ನಲ್ಲಿ ಠೇವಣಿ ಇರಿಸಿದ್ದ 662 ಗ್ರಾಹಕರಿಗೆ 5.36 ಕೋಟಿ ಹಣ ಪಾವತಿಯಾಗಿದ್ದು ಉಳಿದವರ ಹಣವೂ ವಾಪಸ್ ಬರಲಿದ್ದು, ಯಾರೂ ಆತಂಕಪಡಬೇಕಿಲ್ಲ. ಹಲವು ಗ್ರಾಹಕರು ಠೇವಣಿ ಹಣ ವಾಪಸ್ ನಿಡುವಂತೆ ಮನವಿ ಮಾಡಿದರು. ರಿಸರ್ವ್ ಬ್ಯಾಂಕ್ನಿಂದ ಗ್ರಾಹಕರಿಗೆ ಮೇಸಜ್ ಬಂದು ಡಿಪಾಸಿಟ್ ಹಣ ವಾಪಸ್ಸು ಬರುತ್ತಿದೆ ಎಂದು ವಿವರಿಸಿದರು.
ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ದೆಹಲಿಯ ವಿಜ್ಞಾನ ಭವನದಿಂದ ವರ್ಚುಯಲ್ ಮೂಲಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿ.ಪಂ.ಸಿಇಓ ವಿಜಯ ಮಹಾಂತೇಶ ದಾನಮ್ಮನವರ್,ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕೆನರಾ ಬ್ಯಾಂಕ್ ಸಹಾಯಕ ಪ್ರಭಂದಕ ರಘುರಾಜ್ ಸೇರಿದಂತೆ ವಿವಿಧ ಬ್ಯಾಂಕುಗಳು ಮುಖ್ಯಸ್ಥರು ಫಲಾನುಭವಿಗಳು ಹಾಜರಿದ್ದರು.



