ಬೆಂಗಳೂರು: ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದ 4,11,000 ಮಂದಿಗೆ ಪಡಿತರ ಚೀಟಿ ನೀಡಲು ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.
ವಿಧಾನಸೌಧದ ಮುಂಭಾಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಜನಸೇವಕ-ಮನೆಬಾಗಿಲಿಗೆ ಸರ್ಕಾರದ ಸೇವೆಗಳು- ಜನಸ್ಪಂದನ- ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆಯ ಸಹಾಯವಾಣಿ 1902, ಮೊಬೈಲ್ ಆಫ್, ವೆಬ್ ಪೋರ್ಟಲ್ಗಳು ಹಾಗೂ ಸಾರಿಗೆ ಇಲಾಖೆಯ 30 ಸಂಪರ್ಕ ರಹಿತ ಆನ್ಲೈನ್ ಸೇವೆಗಳನ್ನು ಲೋಕಾರ್ಪಣೆ ಮಾಡಿ ಸಿಎಂ ಮಾತನಾಡಿದರು.
ಪಡಿತರ ಚೀಟಿಗಾಗಿ ಅರ್ಜಿ ಹಾಕಿದ್ದ 2.60 ಲಕ್ಷ ಬಿಪಿಎಲ್ ಹಾಗೂ 1.45 ಲಕ್ಷ ಎಪಿಎಲ್ ಪಡಿತರ ಚೀಟಿ ನೀಡಲು ತೀರ್ಮಾನಿಸಲಾಗಿದೆ. ಸುಮಾರು ವರ್ಷ ಹೊಸ ಪಡಿತರ ಚೀಟಿಗಾಗಿ ಇವರೆಲ್ಲ ಕಾಯುತ್ತಿದ್ದವರಿಗೆ ಅನುಕೂಲವಾಗಲಿದೆ. ಜನಸೇವಕ, ಜನಸ್ಪಂದನ ಹಾಗೂ ಸಹಾಯವಾಣಿ ಮತ್ತು ಸಾರಿಗೆ ಇಲಾಖೆಯ ಸಂಪರ್ಕರಹಿತ ಸೇವೆಗಳು ಸರಿಯಾಗಿ ನಡೆಯುತ್ತಿವೆಯೆ, ಇಲ್ಲವೆ ಎಂಬುದನ್ನು ತಿಳಿಯಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದು ಹೇಳಿದರು.
ಜನರ ಬಳಿಗೆ ಸರ್ಕಾರ ಅಥವಾ ಮಾಲೀಕರ ಬಳಿಗೆ ಸೇವಕರು ಹೋಗುವ ಮೂಲಕ ಹೊಸ ದಿಕ್ಸೂಚಿಯತ್ತ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯೋತ್ಸವದ ಸಂದರ್ಭದಲ್ಲಿ ಸರ್ಕಾರದ ಸೇವೆಗಳು ಜನರ ಬಳಿಗೆ ಹೋಗುತ್ತಿರುವ ಕ್ರಾಂತಿಕಾರಕ ಬದಲಾವಣೆಯಾಗಿದೆ ಎಂದು ತಿಳಿಸಿದರು. ಅಧಿಕಾರಿಗಳಿಗೆ ಸೇವೆ ಮಾಡುವ ಅಧಿಕಾರ ಇದ್ದು, ಸೌಜನ್ಯ ಭರಿತರಾಗಿ ಕೆಲಸ ಮಾಡಬೇಕು. ಅದೇ ರೀತಿ ಸೇವೆ ಪಡೆಯುವವರು ಮತ್ತು ಸೇವೆ ನೀಡುವವರು ಇಬ್ಬರೂ ಸ್ನೇಹಪರವಾಗಿ ಸೌಜನ್ಯಯುತವಾಗಿ ವರ್ತಿಸಬೇಕು ಎಂದರು.
ಜನವರಿ 26ಕ್ಕೆ ಗ್ರಾಮೀಣ ಪ್ರದೇಶದ ಸೇವೆಗಳನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯೊಲು ಅನುಷ್ಟಾನಗೊಳಿಸಲಾಗುವುದು. ಇಂದು ಚಾಲನೆ ನೀಡಿದ ಸೇವೆಗಳ ಯಶಸ್ವಿ ಅನುಷ್ಠಾನಕ್ಕೆ ಅಧಿಕಾರಿಗಳು ಉತ್ಸಾಹದಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.ಕರ್ನಾಟಕದ ಆಡಳಿತದಲ್ಲಿ ಇಂದು ಮಹತ್ವದ ದಿನ. ಬದಲಾವಣೆಯ ಪರ್ವ ಪ್ರಾರಂಭವಾಗಿದೆ. ಜನ ಪ್ರತಿನಿಗಳು ಆಳುವ ಕೆಲಸ ಮಾಡಬೇಕು. ಅಧಿಕಾರಿಗಳು ಆಡಳಿತ ಮಾಡಬೇಕು. ಆದರೆ, ಇತ್ತೀಚೆಗೆ ಆಳುವವರು, ಆಡಳಿತ ಮಾಡಲು, ಆಡಳಿತ ಮಾಡುವವರು ಆಳಲು ಹೊರಟಿದ್ದಾರೆ. ನಮ್ಮ -ನಮ್ಮ ಕರ್ತವ್ಯದ ಬಗ್ಗೆ ಈ ಎರಡೂ ವರ್ಗಗಳಲ್ಲಿ ಸ್ಪಷ್ಟತೆ ಇರಬೇಕು.
ಜನರ ಸಮಸ್ಯೆ ನಿವಾರಣೆಗೆ ಜನಸ್ನೇಹಿ ಆಡಳಿತ ನೀಡಬೇಕು. ಅಧಿಕಾರಶಾಹಿ ವಿಳಂಬ ಧೋರಣೆಯಿಂದ ನಾಗರಿಕ ಸೇವೆಗಳು ಮರೀಚಿಕೆ ಆಗಿರುವುದನ್ನು ತಪ್ಪಿಸಲು ಜನರ ಮನೆಬಾಗಿಲಿಗೆ ಸೇವೆ ತಲುಪಿಸುತ್ತಿದ್ದೇವೆ. ಸಕಾಲ ಯೋಜನೆಯಡಿ ಜನಸೇವಕ ಯೋಜನೆ ಜಾರಿಗೆ ತಂದಿದೇವೆ. ಜನರ ಸುತ್ತ ಆಡಳಿತ ಇರಬೇಕು. ಅವರ ಸುತ್ತ ಅಭಿವೃದ್ಧಿ ಆಗಬೇಕು ಎಂಬುದು ಸರ್ಕಾರದ ಮುಖ್ಯಧ್ಯೇಯ.
ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ನೇತೃತ್ವದ ಸಮಿತಿ ಆಡಳಿತ ಸುಧಾರಣೆಗೆ ನೀಡಿರುವ ವರದಿಯ ಅನುಷ್ಠಾನಕ್ಕೆ ಇಂದಿನಿಂದ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ಜನಸೇವಕ ಮನೆಯ ಬಾಗಿಲಿಗೆ ಬಂದು ಸೇವೆ ಒದಗಿಸುವುದರಿಂದ ಸಮಯ, ಹಣ ಉಳಿಯುತ್ತದೆ. ಕಚೇರಿಗೆ ಅಲೆಯುವ ಸಮಯವನ್ನು ಬೇರೆ ಕಾರ್ಯಗಳಿಗೆ ಒದಗಿಸಿದಾಗ ಆದಾಯ ವೃದ್ಧಿಸುತ್ತದೆ. ಇದರಿಂದ ಕುಟುಂಬವು ಸಂತೋಷದಿಂದ ಇರುತ್ತದೆ ಹಾಗೂ ಸರ್ಕಾರದ ಖಜಾನೆಗೂ ಆದಾಯ ಬರುತ್ತದೆ ಎಂದು ತಿಳಿಸಿದರು.