ಬೆಂಗಳೂರು : ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಮಿಷನ್ ಗಿರಾಕಿ ಎಂದು ಹೇಳಿ ಪೇಚೆಗೆ ಸಿಲುಕಿದ್ದ ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ, ಇದೀಗ ಘಟನೆ ಬಗ್ಗೆ ಮಾತನಾಡಿದ್ಧಾನೆ. ನನಗೆ ಡಿ.ಕೆ. ಶಿವಕುಮಾರ್ ಗಾಡ್ ಫಾದರ್, ನನ್ನ ಉಸಿರು ಇರುವವರೆಗೂ ನಾನು ಕಾಂಗ್ರೆಸ್ ನಲ್ಲಿರುತ್ತೇನೆ. ನನ್ನನ್ನು ಉಚ್ಛಾಟನೆ ಮಾಡಿರುವುದು ನೋವು ತಂದಿದೆ ಎಂದು ಸಲೀಂ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ನಿನ್ನೆ ನಡೆದ ಘಟನೆಯಿಂದ ನಾನು ಸಾಕಷ್ಟು ನೊಂದಿದ್ದೇನೆ. ನನಗೆ ಮುಖ ತೋರಿಸಲು ಮುಜುಗರವಾಗುತ್ತಿದೆ. ಡಿ.ಕೆ.ಶಿವಕುಮಾರ್ ಅವರ ಬಳಿ ಕೈ ಮುಗಿದು ಕ್ಷಮೆ ಯಾಚಿಸುತ್ತೇನೆ ಎಂದರು.
ನೀರಾವರಿ ಇಲಾಖೆಯಲ್ಲಿ ನಡೆದ ನೂರಾರು ಕೋಟಿ ಅವ್ಯವಹಾರದ ಬಗ್ಗೆ ಮಾತನಾಡುತ್ತಿದ್ದೆವು. ನಾನು ಬಿ.ವೈ. ವಿಜಯೇಂದ್ರ ಅವರ ಬಗ್ಗೆ ಮಾತನಾಡಿದ್ದೆ. ಇದೆಲ್ಲವೂ ನಾನಾಡಿದ ಮಾತಿನ ಮುಂದಿನ ಭಾಗದಲ್ಲಿ ಇದೆ. ಆದರೆ ಅರ್ಧ ಮಾತ್ರ ತೋರಿಸಲಾಗಿದೆ. ಡಿಕೆಶಿ ಮೇಲಿನ ಐಟಿ ದಾಳಿ ಬಗ್ಗೆ ನಾನೇ ಹೋರಾಟ ಕೂಡ ಮಾಡಿದ್ದೆ. ತೊದಲು ಮಾತನಾಡುತ್ತಾರೆ ಎಂಬ ವೈರಲ್ ವಿಡಿಯೋ ಬಗ್ಗೆ ಚರ್ಚೆ ಮಾಡಿದ್ದೇನೆ ಬಿಟ್ಟರೆ ಡಿಕೆಶಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕಾಂಗ್ರೆಸ್ ನಾಯಕರಾದ ಸಲೀಂ ಹಾಗೂ ವಿ.ಎಸ್.ಉಗ್ರಪ್ಪ ಅವರ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಈ ನಡುವೆ ಅಚಾನಕ್ ಆಗಿ ನಡೆದ ಘಟನೆಗೆ ಕ್ಷಮೆ ಕೋರುವೆ, ಉದ್ದೇಶಪೂರ್ವಕವಾಗಿ ಮಾತನಾಡಿದ್ದಲ್ಲ ಎಂದು ತಿಳಿಸಿದ್ದರು.



