ಡಿವಿಜಿ ಸುದ್ದಿ, ದಾವಣಗೆರೆ: ನಾಳೆ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಹಿನ್ನೆಲೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಳೇ ಪಿ.ಬಿ ರಸ್ತೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಡಿ.ಸಿ.ಎಂ ಟೌನ್ಷಿಫ್ ರೈಲ್ವೇ ಸೇತುವೆಯ ವರೆಗೆ ಸಂಪೂರ್ಣ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ. ಬಿಪಿ ರಸ್ತೆಯ ಡಿಆರ್ ಆರ್ ಶಾಲೆಯಲ್ಲಿ ಮತ ಎಣಿಕೆ ನಡೆಯುವುದರಿಂದ ಪಿಬಿ ರಸ್ತೆ ಸಂಪೂರ್ಣವಾಗಿ ಬಂದ್ ಆಗಲಿದೆ.
ಮಾರ್ಗ ಬದಲಾವಣೆ
ಚಿತ್ರದುರ್ಗ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಈರುಳ್ಳಿ ಮಾರುಕಟ್ಟೆ ರಸ್ತೆ ಮುಖಾಂತರ ಆರ್.ಎಂ.ಸಿ ರಸ್ತೆ ಗಣೇಶ ಹೋಟೆಲ್ ಸರ್ಕಲ್ ಬಳಿ ಬಲ ತಿರುವು ಪಡೆದು ನೇರವಾಗಿ ದನದ ಮಾರುಕಟ್ಟೆ ಬಳಿಯ ರಸ್ತೆಗೆ ಸೇರಿ ಬಲ ತಿರುವು ಪಡೆದು ಪಿ.ಬಿ. ರಸ್ತೆಯನ್ನು ಸೇರುವುದು.
ಚಿತ್ರದುರ್ಗ ಮಾರ್ಗವಾಗಿ ಬರುವ ವಾಹನ ಸವಾರರು, ಕೆ.ಎಸ್.ಆರ್.ಟಿ.ಸಿ ಬಸ್, ಮತ್ತು ಖಾಸಗಿ ಬಸ್ ಚಾಲಕರು ಬಾಡಾ ಕ್ರಾಸ್ ಬಳಿ ತಿರುವು ಪಡೆಯದೇ ಮುಂದುವರೆದು ಹದಡಿ ರಸ್ತೆ ಬಳಿ ತಿರುವು ಪಡೆದು ಹದಡಿ ರಸ್ತೆ ಮುಖಾಂತರ ನಗರವನ್ನು ಪ್ರವೇಶ ಪಡೆಯುವುದು.
ಮತ ಎಣಿಕೆ ಕೇಂದ್ರಕ್ಕೆ ಬರುವ ಅಭ್ಯರ್ಥಿಗಳು ಹಾಗೂ ಏಜೆಂಟರುಗಳು ಮಾತ್ರ ತಮ್ಮ ಪಾಸ್ ನ್ನು ತಪಾಸಣಾ ಕೇಂದ್ರದಲ್ಲಿ ತೋರಿಸಿ ಡಿ.ಆರ್.ಆರ್ ಶಾಲೆ ಹಿಂಭಾಗದ ಆಟದ ಮೈದಾನದ ಆವರಣದಲ್ಲಿ ನಿಗದಿಪಡಿಸಲಾಗಿದೆ. ಗುರುತಿನ ಚೀಟಿ ಇಲ್ಲದೇ ಇರುವ ವ್ಯಕ್ತಿಗಳನ್ನು ಪ್ರವೇಶಕ್ಕೆ ನಿರ್ಬಂಧಿಸಲಾಗಿರುತ್ತದೆ.
ಮತ ಎಣಿಕೆ ಕೇಂದ್ರಕ್ಕೆ ಬರುವ ಎಲ್ಲಾ ಪಕ್ಷದ ಕಾರ್ಯಕರ್ತರಿಗೆ ಮತ ಎಣಿಕೆ ಕೇಂದ್ರದ ಒಳಗೆ ಪ್ರವೇಶವನ್ನು ನಿಷೇಧಿಸಲಾಗಿದ್ದು, ಮತ ಎಣಿಕೆ ಕೇಂದ್ರದ ಎದುರು ಇರುವ ಅಗ್ನಿಶಾಮಕ ಠಾಣೆಯ ಆವರಣದಲ್ಲಿ ಎಲ್ಲಾ ಪಕ್ಷದ ಕಾರ್ಯಕರ್ತರಿಗೆ ಇರುವಿಕೆಯನ್ನು ಗುರುತಿಸಲಾಗಿರುತ್ತದೆ.
ಮತ ಎಣಿಕೆ ಕೇಂದ್ರಕ್ಕೆ ಬರುವ ಎಲ್ಲಾ ಪಕ್ಷದ ಕಾರ್ಯಕರ್ತರು ಕೆ.ಎಸ್.ಅರ್.ಟಿ.ಸಿ ಬಸ್ ನಿಲ್ದಾಣದ ಎದುರು ಇರುವ ತರಕಾರಿ ಮಾರುಕಟ್ಟೆಯ ಅಡಿಕೆ ಮಂಡಿಗಳ ಮುಂಭಾಗದ ರಸ್ತೆಗಳಲ್ಲಿ ವಾಹನ ನಿಲುಗಡೆಯ ಸೌಲಭ್ಯವನ್ನು ಕಲ್ಪಿಸಲಾಗಿರುತ್ತದೆ. ಈ ಸ್ಥಳದಲ್ಲಿಯೇ ವಾಹನಗಳನ್ನು ಕಡ್ಡಾಯವಾಗಿ ನಿಲುಗಡೆ ಮಾಡಿ ಬರಲು ಸೂಚಿಸಲಾಗಿರುತ್ತದೆ. ಮತ ಎಣಿಕೆಗೆ ಸಾರ್ವಜನಿಕರು ಸಹಕರಿಸಬೇಕೆಂದು ತಿಳಿಸಲಾಗಿದೆ.



