ಡಿವಿಜಿ ಸುದ್ದಿ, ದಾವಣಗೆರೆ: ಕಳೆದ ಬಾರಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕೇವಲ ಒಂದು ಸೀಟು ಗೆದ್ದಿದ್ದ ಬಿಜೆಪಿ, ಈ ಬಾರಿ ಕನಿಷ್ಟ 35 ಸೀಟು ಗೆಲ್ಲುವ ವಿಶ್ವಾಸದಲ್ಲಿತ್ತು. ಆದರೀಗ, ಬಿಜೆಪಿಗೆ ಬಂಡಾಯ ಅಭ್ಯರ್ಥಿಗಳು ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ.
ಒಟ್ಟು 45 ವಾರ್ಡ್ ಗಳಿರುವ ಮಹಾನಗರ ಪಾಲಿಕೆಯಲ್ಲಿ ಎಲ್ಲ ವಾರ್ಡ್ ಗಳಲ್ಲಿ ಬಿಜೆಪಿ ಸ್ಪರ್ಧೆ ಮಾಡಿದ್ದು,15 ಕಡೆ ಬಿಜೆಪಿ ಬಂಡಾಯ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಆಡಳಿತದಲ್ಲಿದ್ದ ಕಾಂಗ್ರೆಸ್ ಎರಡ್ಮೂರು ಕಡೆ ಬಂಡಾಯ ಬಿಟ್ಟರೆ ಅಷ್ಟೊಂದು ಬಂಡಾಯ ಕಾಣಿಸಿಕೊಂಡಿಲ್ಲ. ಆದರೆ, ಗೆಲುವಿನ ಉತ್ಸಾಹದಲ್ಲಿದ್ದ ಬಿಜೆಪಿಗೆ ಬಂಡಾಯ ತಲೆ ನೋವಾಗಿ ಪರಿಣಮಿಸಿದೆ.
ನಾಮಪತ್ರ ವಾಪಸ್ಸು ತಗೆದುಕೊಳ್ಳಲು ಕೊನೆ ದಿನವಾಗಿತ್ತು. ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಯಾರು ಕೂಡ ನಾಮಪತ್ರ ವಾಪಾಸ್ಸು ಪಡೆದಿಲ್ಲ. ಪ್ರಮುಖವಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ್ , ಮಾಜಿ ಮೇಯರ್ ಉಮಾ ಪ್ರಕಾಶ್, ಮಾಜಿ ಶಾಸಕ ಹಾಗೂ ಬಿಜೆಪಿ
ಘಟಕದ ಮಾಜಿ ಅಧ್ಯಕ್ಷ ಗುರುಸಿದ್ದನಗೌಡ ಸೊಸೆ ಪ್ರೀತಿ ರವಿಕುಮಾರ್ , ಅತೀತ್ ಅಂಬಕರ್ ಸೇರಿದಂತೆ ಒಟ್ಟು 15 ಅಭ್ಯರ್ಥಿಗಳು ಬಂಡಾಯದ ಅಭ್ಯರ್ಥಿಗಳಾಗಿ ಕಣದಲ್ಲಿ ಉಳಿದ್ದಿದ್ದಾರೆ.
ಈ 15 ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಜೊತೆ ಬಿಜೆಪಿ ಬಂಡಾಯ ಅಭ್ಯರ್ಥಿಗಳನ್ನು ಎದುರಿಸಬೇಕಿದೆ. ಈ ಮೂಲಕ ಗೆಲುವಿನ ಉತ್ಸಾಹದಲ್ಲಿದ್ದ ಬಿಜೆಪಿಗೆ ತಡೆವೊಡ್ಡುತ್ತಾ ಎನ್ನುವ ಪ್ರಶ್ನೆ ಉಂಟಾಗಿದೆ. ಈ ಎಲ್ಲ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ನ.14 ವರೆಗೆ ಕಾಯಲೇ ಬೇಕಾಗಿದೆ.



