ದಾವಣಗೆರೆ: ಇಂದು ದಾವಣಗೆರೆ ವಿಶ್ವವಿದ್ಯಾನಿಲಯ ಕ್ಯಾಂಪಸ್ ನಲ್ಲಿ8 ನೇ ಘಟಿಕೋತ್ಸವ ಆಚರಿಸಲಾಯಿತು. 44 ವಿದ್ಯಾರ್ಥಿಗಳಿಗೆ 74 ಚಿನ್ನದ ಪದಕಗಳನ್ನು ವಿತರಿಸಲಾಯಿತು. 11,193 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. 7 ಪಿಎಚ್ಡಿ ಹಾಗೂ ಇಬ್ಬರು ಎಂ.ಫಿಲ್ಗೆ ಪದವಿ ವಿತರಿಸಲಾಯಿತು. ಸಂಸದ ಜಿ.ಎಂ.ಸಿದ್ದೇಶ್ವರ ಮತ್ತು ವೈದ್ಯಕೀಯ ಕಾಲೇಜು ಪ್ರಾಧ್ಯಾಪಕ ಡಾ. ಎಂ.ಕೆ. ರಮೇಶ್ ಅವರಿಗೆ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಿಕ್ಷಣ ಚಿಂತಕ ಅಧ್ಯಕ್ಷ ಡಾ. ಗುರುರಾಜ್ ಕರ್ಜಗಿ ಮಾತನಾಡಿ, ಸಾಧನೆ, ಯಶಸ್ಸು, ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಮಹತ್ವಾಂಕ್ಷೆಯ ಉದ್ದೇಶ, ಸಮಾಜಕ್ಕಾಗಿ ಸಲ್ಲಿಸಿದ ಸೇವೆ, ನೀಡಿದ ಕೊಡುಗೆಗಳೇ ಅದರ ಮಾನದಂಡವಾಗಿರುತ್ತದೆ, ಅವುಗಳೇ ವ್ಯಕ್ತಿಯ ವ್ಯಕ್ತ್ತಿತ್ವವನ್ನು ರೂಪಿಸುತ್ತದೆ ಎಂದು ತಿಳಿಸಿದರು.

ಸಮಾಜಕ್ಕೆ, ದೇಶಕ್ಕೆ ನಾವೇನು ಕೊಡುಗೆ ನೀಡುತ್ತೇವೆ ಎಂಬುದರಲ್ಲಿ ಮನುಷ್ಯನ ಜೀವನದ ಯಶಸ್ಸು ಅಡಗಿದೆಯೇ ಹೊರತು ಸಮಾಜದಿಂದ ನಾವೇನು ಪಡೆದೆವು ಎಂಬುದರಲ್ಲಿ ಅಲ್ಲ ಎಂದು ಯಶಸ್ಸಿನ ಬಗ್ಗೆ ಪ್ರತಿಯೊಬ್ಬರಲ್ಲೂ ಒಂದೊಂದು ಬಗೆಯ ಕಲ್ಪನೆ ಇರುತ್ತದೆ. ಕೆಲವರಿಗೆ ಹಣ ಗಳಿಕೆಯೇ ಯಶಸ್ಸು ಎನಿಸಿದರೆ, ಇನ್ನೂ ಕೆಲವರಿಗೆ ಆಸ್ತಿ, ಅಂತಸ್ತು ಆಗಿರುತ್ತದೆ. ಇನ್ನಷ್ಟು ಜನರಿಗೆ ತಮ್ಮಲ್ಲಿರುವ ದೈಹಿಕ ಬಲ ಸಾಮಥ್ರ್ಯ, ಗಳಿಕೆ, ಉದ್ಯಮ, ಇತ್ಯಾದಿಗಳೇ ಯಶಸ್ಸು ಎನಿಸುತ್ತವೆ. ಆದರೆ ಅವುಗಳಿಗಿಂತ ಇನ್ನೊಬ್ಬರ ಹೃದಯದಲ್ಲಿ ನೆಲೆಗೊಳ್ಳುವುದು ಬಹುದೊಡ್ಡ ಸಾಧನೆ ಎಂಬುದನ್ನು ಅರಿಯಬೇಕು ಎಂದರು.
ಕೊಡಲು ನಿಮ್ಮ ಬಳಿ ಏನೂ ಇಲ್ಲದೆ ಇದ್ದರೂ ಚಿಂತೆಯಿಲ್ಲ, ನೀಡುವ ತೆರೆದ ಹೃದಯವಿದ್ದರೆ ಸಾಕು. ಕೊಡಲು ಇಂತಹದ್ದೇ ಬೇಕೆಂಬುದನ್ನು ಹೃದಯ ಬೇಡುವುದಿಲ್ಲ. ಕೆಲವರಿಗೆ ಸಮಯ ನೀಡಿದರೂ ಸಾಕು. ಸ್ನೇಹಿತರ ಜೊತೆ ಸಮಯ ಕಳೆದರೂ ಮನಸ್ಸು ಹಗುರಾಗುತ್ತದೆ. ಸಂಬಂಧ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ನೋವಿಗೆ ಸ್ಪಂದನೆ, ಪ್ರೀತಿಗೆ ಪ್ರೀತಿ ನೀಡಿದರೂ ಸಾಕು, ಕೆಲವರಿಗೆ ಮಾರ್ಗದರ್ಶನ, ಹಸಿದವರಿಗೆ ಅನ್ನ, ಬಾಯಾರಿದವರಿಗೆ ನೀರು, ಕೊಡುವುದರಲ್ಲಿಯೂ ಯಶಸ್ಸು ಅಡಗಿದೆ ಎಂದು ನುಡಿದರು.
ಬುದ್ಧ, ಗಾಂಧಿ, ಅಂಬೇಡ್ಕರ್, ಮದರ್ ತೆರೇಸಾ ಮಾರ್ಟಿನ್ ಲೂಥರ್ ಕಿಂಗ್ ಅವರೆಲ್ಲಾ ಇಷ್ಟು ವರ್ಷವಾದರೂ ನಮ್ಮ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅಷ್ಟೇ ಅಲ್ಲ ರಾಮ, ಕೃಷ್ಣ, ಶಂಕರಾಚಾರ್ಯ ಮೊದಲಾದವರು ಶತಶತಮಾನ ಕಳೆದರೂ ಎಲ್ಲರ ಬಾಯಿಯಲ್ಲಿ, ಹೃದಯದಲ್ಲಿ ನೆಲೆಸಿದ್ದಾರೆ. ಸಮಾಜಕ್ಕೆ ನೀಡಿದ ಕೊಡುಗೆಯೇ ಇದಕ್ಕೆ ಕಾರಣ. ಮನುಷ್ಯ ಸತ್ತಾಗ ಹೇಗೆ ಸತ್ತ ಎಂದು ಕೇಳುವುದಿಲ್ಲ, ಹೇಗೆ ಬದುಕಿದ್ದ ಎಂದು ನೊಡುತ್ತಾರೆ. ಹಾಗೆಯೇ ಏನು ಗಳಿಸಿದ ಎಂಬುದನ್ನು ವಿಚಾರಿಸುವುದಿಲ್ಲ. ಸಮಾಜಕ್ಕೆ ಏನು ಕೊಟ್ಟ ಎಂಬುದನ್ನು ಮಾತ್ರ ಅವಲೋಕಿಸುತ್ತಾರೆ. ಆದ್ದರಿಂದ ಎಲ್ಲರ ಮನದಲ್ಲಿ ನೆಲೆಗೊಳ್ಳುವ ಸಂಕಲ್ಪ ಮಾಡಿಕೊಳ್ಳಿ. ಎಲ್ಲರಲ್ಲೂ ಆ ಸಾಮಥ್ರ್ಯವಿದೆ. ಅದನ್ನು ಸರ್ಮಪಕವಾಗಿ ಬಳಸಿಕೊಳ್ಳಿ ಎಂದರು.

ಇನ್ನೊಬ್ಬರ ಹೃದಯದಲ್ಲಿ ನೆಲೆಸಲು ಹಣ, ಆಸ್ತಿ, ಅಂತಸ್ತು ಅಥವಾ ತೋಳ್ಬಲ ಬೇಕಿಲ್ಲ, ಕೇವಲ ಪ್ರೀತಿ, ಸಹಾನುಭೂತಿ, ವಿಶ್ವಾಸದ ಎರಡು ಮಾತುಗಳು ಸಾಕು. ಇನ್ನೊಬ್ಬರ ಮನದಲ್ಲಿ ನೆಮ್ಮದಿ ಸಂತಸದ ಎರಡು ಭಾಷ್ಪ ಹೊರಬಂದರೂ ಅದು ಯಶಸ್ಸು ಎನಿಸುತ್ತದೆ. ಇದನ್ನು ಸಾಕಾರಗೊಳಿಸಲು, ಈ ನಿಟ್ಟಿನಲ್ಲಿ ಯಶಸ್ಸು ಸಾಧಿಸಲು ನಿರ್ಮಲವಾದ ಪ್ರೀತಿ ತುಂಬಿದ ಹೃದಯಬೇಕು. ಆ ಹೃದಯವನ್ನು ಬೇರೆಯವರ ಹಿತಕ್ಕಾಗಿ, ನೆಮ್ಮದಿಯಾಗಿ, ಸಮಾಜದ ಒಳಿತಿಗಾಗಿ ವಿನಿಯೋಗಿಸಿದರೆ ಯಶಸ್ಸು ತಾನಾಗಿಯೇ ಬರುತ್ತದೆ ಎಂದು ಹೇಳಿದರು.
ನಾನು ನನ್ನದು ಎಂಬ ಸ್ವಾರ್ಥ ಬಿಟ್ಟು ನಮ್ಮದು, ನಮ್ಮವರು ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು. ಆಗ ಪ್ರೀತಿ, ಆತ್ಮೀಯತೆ, ಸಂಬಂಧ ಹತ್ತಿರವಾಗುತ್ತದೆ. ದ್ವೇಷ ತಾನಾಗಿಯೇ ದೂರವಾಗುತ್ತದೆ. ಹೃದಯಗಳು ಹತ್ತಿರವಾಗಿ ನೆಮ್ಮದಿ, ಸಂತೃಪ್ತಿ ಹೆಚ್ಚಾಗುವುದು. ಆ ಮೂಲಕ ವೈಯಕ್ತಿಕ ಹಾಗೂ ಸಮಾಜದ ಆರೋಗ್ಯ ಸುಧಾರಿಸುವುದು. ಸದೃಢ ಆರೋಗ್ಯವಂತ ದೇಶವನ್ನು ಕಟ್ಟಲು ಸಾಧ್ಯವಾಗುತ್ತದೆ. ಇದು ಹೊರಗೆ ಸಿಗುವ ವಸ್ತುವಲ್ಲ, ಪ್ರತಿಯೊಬ್ಬರ ಮನಸ್ಸಿನಲ್ಲಿ ಅಡಗಿರುವ ಪರಮೋಚ್ಛ ಸಂಕಲ್ಪ. ಅದನ್ನು ಸದ್ಬಳಕೆಗೆ ಉಪಯೋಗಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ನೀಡುವ ವಿಚಾರ ಹೃದಯ ಮತ್ತು ಮಿದುಳಿಗೆ ಸಂಬಂಧಿಸಿದ್ದು. ಹೃದಯ ಮಿಡಿತಕ್ಕೆ ಮಿದುಳು ಸ್ಪಂದಿಸುತ್ತದೆ. ನೀಡಿದ್ದು ಸದ್ವಿನಿಯೋಗವಾದರೆ ಎರಡೂ ನೆಮ್ಮದಿಯಾಗಿರುತ್ತವೆ. ನೆಮ್ಮದಿ ಇದ್ದಾಗ ಆರೋಗ್ಯ ಸುಧಾರಿಸುತ್ತದೆ. ಆರೋಗ್ಯಪೂರ್ಣ ದೇಹಕ್ಕೆ ಆರೋಗ್ಯವಂತ ಮನಸ್ಸು ಮುಖ್ಯ ಎಂಬುದು ಭಾವನಾತ್ಮಕ ಕಲ್ಪನೆಯ ವಿಚಾರವಲ್ಲ. ಇದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಖ್ಯಾತ ನರರೋಗ ತಜ್ಞ ಡಾ. ಜೋರ್ಡಾನ್ ಗ್ರಾಫ್ಮನ್ ಇದನ್ನೆ ಹೃದಯದಿಂದ ನೀಡಿದರೆ ಮಿದುಳಿಗೆ ತೃಪ್ತಿಯಾಗುತ್ತದೆ ಎಂಬುದಾಗಿ ಹೇಳಿದ್ದಾರೆ ಎಂದು ಕರ್ಜಗಿ ಹೇಳಿದರು.
ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಮಾತನಾಡಿ, ದಾವಣಗೆರೆ ವಿಶ್ವವಿದ್ಯಾಲಯವು ಈ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದಕ್ಕೆ ಮಾತ್ರ ಸೀಮಿತವಾಗಿರದೆ, ಅವರ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಹತ್ತು ಕುಗ್ರಾಮಗಳ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಆದ್ಯತೆ ನೀಡಿದೆ. ಆ ಶಾಲೆಯ ಮಕ್ಕಳಿಗೆ ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ಗುಣಮಟ್ಟ ಶಿಕ್ಷಣ ನೀಡಲಾಗುವುದು ಎಂದು ಹೇಳಿದರು.
ಮಕ್ಕಳಿಗೆ ನೈತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರಾಯೋಗಿಕವಾಗಿ ತಿಳಿಸಲು ಗಮನ ನೀಡಿದೆ. ಅದಕ್ಕಾಗಿ ಗ್ರಾಮದಲ್ಲಿಯೇ ಇದ್ದು ಅಧ್ಯಯನ ಮಾಡಲು, ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಒಳಗೊಂಡ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ನುಡಿದರು.
ಮೌಲ್ಯಮಾಪನ ಕುಲಸಚಿವೆ ಪ್ರೊ. ಅನಿತಾ.ಹೆಚ್.ಎಸ್, ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ, ಹಣಕಾಸು ಅಧಿಕಾರಿ ಪ್ರಿಯಾಂಕ.ಡಿ, ಪ್ರೊ.ಜೆ.ಕೆ.ರಾಜು, ಪ್ರೊ.ಕೆ.ಬಿ.ರಂಗಪ್ಪ, ಸಿಂಡಿಕೇಟ್ ಸದಸ್ಯರು ಮತ್ತು ವಿದ್ಯಾ ವಿಷಾಯಕ ಪರಿಷತ್ ಸದಸ್ಯರು, ಅಭಿಯಂತರರು, ವಿವಿಧ ನಿಕಾಯದ ಡೀನ್ಗಳು, ವಿಭಾಗದ ಅಧ್ಯಕ್ಷರು, ಅಧ್ಯಾಪಕ ಮತ್ತು ಅಧ್ಯಾಪಕೇತರ ನೌಕರರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.