ತುಮಕೂರು: ಸದ್ಯ ರಾಜ್ಯದಲ್ಲಿ ಜುಲೈ 15ರಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭಿಸುವ ಚಿಂತನೆ ನಡೆದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ ಕುಮಾರ್ ಹೇಳಿದರು.
ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೊನಾ ಸೋಂಕಿನ ಭೀತಿಯ ನಡುವೆಯೂ ಮುಂದಿನ ಶೈಕ್ಷಣಿಕ ವರ್ಷ ಆರಂಭಿಸುವುದಕ್ಕೆ ತುರ್ತು ಪರಿಸ್ಥಿತಿ ಬಂದೊದಗಿದೆ. ರಾಜ್ಯದಲ್ಲಿ ಸದ್ಯ 1 ರಿಂದ 5ನೇ ತರಗತಿಗಳನ್ನು ನಡೆಸಬಾರದು. ಖಾಸಗಿ ಶಾಲೆಗಳು ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಾರ್ಚ್ 1ನೇ ತಾರೀಖಿನಿಂದ 1-5ನೇ ತರಗತಿ ಆರಂಭಿಸುವ ಇಚ್ಛೆ ಇತ್ತು. ಆದರೆ ಚರ್ಚೆ ಮಾಡಿ, ಬೇಡ ಎಂಬ ಅಭಿಪ್ರಾಯಕ್ಕೆ ಬಂದಿದ್ದೇವೆ. ರಾಜ್ಯದಲ್ಲಿ ಶಾಲೆ ಆರಂಭವಾಗದ ಕಾರಣದಿಂದ ಮಕ್ಕಳು ಗಣಿತವನ್ನೇ ಮರೆತಿದ್ದಾರೆ. ಪಠ್ಯ ವಿಷಯ ಸೇರಿದಂತೆ ಭಾಷೆ ಮರೆತಿದ್ದಾರೆ. ಇದರ ಬಗ್ಗೆ ಅಜೀಂ ಪ್ರೇಮ್ ಜಿ ವಿವಿ ನೀಡಿರುವ ವರದಿ ಆಘಾತಕಾರಿಯಾಗಿದೆ. ಹೀಗಾಗಿ ಜುಲೈ 15 ರಿಂದ 2021-22ನೇ ಸಾಲಿನ ಹೊಸ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ ಎಂದು ಶಿಕ್ಷಣ ಸಚಿವ ಸುರೇಶ ಕುಮಾರ್ ತಿಳಿಸಿದರು.



