-ಕೆ.ರಾಘವೇಂದ್ರ ನಾಯರಿ, ಬ್ಯಾಂಕ್ ಉದ್ಯೋಗಿಗಳ ಸಂಘದ ಮುಖಂಡ
ಕೇಂದ್ರ ಸರಕಾರವು ಈ ವರ್ಷವೂ ಯಥಾ ಪ್ರಕಾರ ವಾಸ್ತವಿಕತೆಯಿಂದ ದೂರವಿರುವ ಕಾಲ್ಪನಿಕವಾದ ಬಜೆಟ್ನ್ನು ದೇಶದ ಜನರಿಗೆ ನೀಡಿದೆ. ಕೊರೋನಾ ಸಾಂಕ್ರಾಮಿಕ ರೋಗದಿಂದ ನಲುಗಿರುವ ದೇಶಕ್ಕೆ ಮತ್ತು ದೇಶವಾಸಿಗಳಿಗೆ ಈ ಬಾರಿಯಾದರೂ ಅತ್ಯಂತ ಜನಪ್ರಿಯವಾದ ಕೊಡುಗೆಗಳನ್ನು ನೀಡುವುದರ ಮೂಲಕ ಅವರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು ಪ್ರಯತ್ನಿಸಬಹುದಿತ್ತು. ಆದರೆ ರೈತರು, ಕಾರ್ಮಿಕರು ಹಾಗೂ ಜನಸಾಮಾನ್ಯರೆಡೆಗೆ ಅತ್ಯಂತ ಸಂವೇದನಾರಹಿತವಾದ ಸರಕಾರದ ಧೋರಣೆ ಮುಂದುವರೆದಿದೆ.

ಕೋಟ್ಯಾಂತರ ಸಂಖ್ಯೆಯಲ್ಲಿ ಉದ್ಯೋಗ ನಾಶವಾಗಿದೆ. ವಿದ್ಯಾವಂತ ಯುವಕರು ಬೀದಿಗೆ ಬಿದ್ದಿದ್ದಾರೆ. ಆದರೆ ಉದ್ಯೋಗ ಸೃಷ್ಠಿಗಾಗಿ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೆಂಬಂತೆ ಕೆಲವೇ ಕೆಲವು ಸಣ್ಣ ಪುಟ್ಟ ಘೋಷಣೆಗಳನ್ನು ಹೊರತುಪಡಿಸಿದರೆ ಅತ್ಯಗತ್ಯವಾದ ಯಾವುದೇ ದೊಡ್ಡ ಯೋಜನೆಗಳನ್ನು ಪ್ರಕಟಿಸದಿರುವುದು ಅತ್ಯಂತ ದೊಡ್ಡ ಸಂಖ್ಯೆಯಲ್ಲಿರುವ ಯುವ ಸಮುದಾಯಕ್ಕೆ ಅನ್ಯಾಯವಾಗಿದೆ.
ವಿಮಾ ಕ್ಷೇತ್ರಕ್ಕೆ 74% ವಿದೇಶಿ ನೇರ ಬಂಡವಾಳಕ್ಕೆ ಅವಕಾಶ ಕಲ್ಪಿಸಿರುವುದು, ಜೀವ ವಿಮಾ ನಿಗಮದ ಶೇರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖಾಸಗಿಯವರಿಗೆ ಮಾರುವ ಪ್ರಸ್ತಾಪ ಸರಿಯಿಲ್ಲ. ಹಾಗೆಯೇ 2 ಸರಕಾರಿ ಸ್ವಾಮ್ಯದ ಬ್ಯಾಂಕುಗಳು, 1 ಸಾಮಾನ್ಯ ವಿಮಾ ಸಂಸ್ಥೆಯನ್ನು ಖಾಸಗಿಕರಣಗೊಳಿಸುವುದು ಅತ್ಯಂತ ದೇಶ ವಿರೋಧಿ ಕ್ರಮವಾಗಿದೆ. ಇವೆಲ್ಲವುಗಳನ್ನು ಹಣಕಾಸು ಸಚಿವರು ಮರು ಪರಿಶೀಲನೆ ಮಾಡಬೇಕು. ಇಲ್ಲದಿದ್ದಲ್ಲಿ ಈ ಸರಕಾರ ರಾಷ್ಟ್ರೀಕರಣ ನೀತಿಯ ವಿರುದ್ಧವಿರುವುದು ಸ್ಪಷ್ಟವಾಗುತ್ತದೆ. ಸರಕಾರದ ಈ ಕೆಟ್ಟ ನೀತಿಗಳ ವಿರುದ್ಧ ಮುಂದಿನ ದಿನಗಳಲ್ಲಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಜನಾಂದೋಲನವನ್ನು ರೂಪಿಸಲಿದೆ.


