ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆ ತಾರಕಕ್ಕೇರಿದ್ದು ಮುಂಜಾನೆಯಿಂದಲೇ ಬ್ಯಾರಿಕೇಡ್ಗಳನ್ನು ಮುರಿದು ಹೊರ ವರ್ತುಲ ರಸ್ತೆಯ ಮೂಲಕ ದೆಹಲಿ ಪ್ರವೇಶಿಸಲು ಯತ್ನ ನಡೆಸುತ್ತಿದ್ದಾರೆ . ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ಗಲಾಟೆ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ರೈತರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.
ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿಯ ಗಡಿಭಾಗಗಳಲ್ಲಿ ಸೇರಿದ ಸಾವಿರಾರು ರೈತರು ಮಂಗಳವಾರ ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ನಿರ್ಧರಿಸಿದ್ದರು. ದೆಹಲಿಯ ರಾಜ್ಪತ್ನಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಮುಗಿದ ನಂತರ ರ್ಯಾಲಿಗೆ ಪೊಲೀಸರು ಅನುಮತಿ ನೀಡಿದ್ದರು.
ಇದನ್ನು ರೈತರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರೂ, ಪೊಲೀಸರ ಮನವಿ ಲೆಕ್ಕಿಸದ ರೈತರ ಗುಂಪು ಬ್ಯಾರಿಕೇಡ್ಗಳನ್ನು ಮುರಿದು ರಿಂಗ್ ರೋಡ್ ಮೂಲಕ ದೆಹಲಿಯತ್ತ ಮುನ್ನುಗ್ಗಿದರು. ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಗೆ ಸೇರಿದ ಕೆಲವು ಸದಸ್ಯರು ಬ್ಯಾರಿಕೇಡ್ಗಳನ್ನು ಮುರಿದಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಕೆಎಸ್ಎಂ) ಸದಸ್ಯರೊಬ್ಬರು ತಿಳಿಸಿದ್ದಾರೆ. ಕೆಎಸ್ಎಂ, ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ 41 ರೈತ ಸಂಘಗಳ ಒಕ್ಕೂಟವಾಗಿದೆ.

ಬೆಳಗ್ಗೆ 11 ಗಂಟೆಯ ಮೇಲೆ ರೈತರ ರ್ಯಾಲಿಗೆ ಅನುಮತಿಯಿದ್ದರೂ ಕೂಡ ಅದಕ್ಕೂ ಮೊದಲೇ ಹೊರಟಿದ್ದರಿಂದ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ನುಗ್ಗಿ ರೈತರು ಬಂದಿದ್ದರಿಂದ ಘರ್ಷಣೆಯ ವಾತಾವರಣ ಉಂಟಾಯಿತು. ಸಾವಿರಾರು ಟ್ರ್ಯಾಕ್ಟರ್ ಗಳು ರ್ಯಾಲಿಯಲ್ಲಿ ಮುಂದೆ ಸಾಗುತ್ತಿವೆ. ಗಾಜಿಪುರ ಗಡಿಯಿಂದ ವಿವಿಧ ಗುಂಪುಗಳಲ್ಲಿ ರೈತರು ಜೈ ಜವಾನ್, ಜೈ ಕಿಸಾನ್ ಘೋಷಣೆ ಕೂಗುತ್ತಾ ಸಾಗುತ್ತಿದ್ದಾರೆ.
ರೈತರು ಅನುಮತಿ ಕೇಳಿದ್ದು ಬೆಳಗ್ಗೆ 11 ಗಂಟೆಯ ಮೊದಲು, ಆದರೆ ಕೆಲವರು ಅದಕ್ಕೂ ಮೊದಲೇ ಬ್ಯಾರಿಕೇಡ್ ಮುರಿದು ನುಗ್ಗಿದರು ಎಂದು ಉತ್ತರ ಪ್ರದೇಶದ ಪೊಲೀಸರೊಬ್ಬರು ಆರೋಪಿಸಿದರು. ರೈತರು ಮುಖ್ಯ ನಗರದೊಳಗೆ ನುಗ್ಗಬಹುದು ಎಂಬ ನಿರೀಕ್ಷೆಯಿಂದ ದೆಹಲಿ ಪೊಲೀಸರು ಪ್ರವೇಶವನ್ನು ತಡೆಯಲು ಜೆಸಿಬಿ ಯಂತ್ರವನ್ನು ನಿಯೋಜಿಸಿದ್ದಾರೆ.
ಅಶ್ರುವಾಯು, ಲಾಠಿಚಾರ್ಜ್: ಇನ್ನು ಸಿಂಘು ಮತ್ತು ಟಿಕ್ರಿ ಗಡಿಭಾಗದಲ್ಲಿ ಪೊಲೀಸ್ ಬ್ಯಾರಿಕೇಡ್ ಮುರಿದು ಹೋಗಲು ಪ್ರಯತ್ನಿಸಿದವರ ಮೇಲೆ ಪೊಲೀಸರು ಅಶ್ರವಾಯು, ಲಾಠಿಚಾರ್ಜ್ ಪ್ರಯೋಗಿಸಿದ ಪ್ರಸಂಗ ನಡೆದಿದೆ.ರಾಜಪಥ್ ನಲ್ಲಿ ಗಣರಾಜ್ಯೋತ್ಸವ ಮುಗಿದ ಬಳಿಕವಷ್ಟೆ ತಮಗೆ ಟ್ರ್ಯಾಕ್ಟರ್ ನಲ್ಲಿ ಹೋಗಲು ಅನುಮತಿ ನೀಡಲಾಗಿದೆ ಎಂದು ಪೊಲೀಸರು ರೈತರ ಮನವೊಲಿಸಲು ಪ್ರಯತ್ನಿಸಿದರೂ ಕೂಡ ಅವರ ಮಾತು ಕೇಳದೆ ಮುನ್ನುಗ್ಗಿದ್ದರಿಂದ ಪೊಲೀಸರು ಅಶ್ರುವಾಯು, ಲಾಠಿಚಾರ್ಜ್ ನಡೆಸಿದ ಪ್ರಸಂಗ ನಡೆಯಿತು.



