ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಾದ್ಯಂತ ಲಘು ಭೂಕಂಪನ ಅನುಭವವಾಗಿದ್ದು, ಹೊರವಲಯದ ಹುಣಸೋಡು ಗ್ರಾಮದ ಬಳಿ ಇರುವ ರೈಲ್ವೆ ಕ್ರಷರ್ ಗೆ ಜಿಲೆಟಿನ್ ಕಡ್ಡಿ ತುಂಬಿಕೊಂಡು ಬಂದಿದ್ದ ಲಾರಿ ಸ್ಫೋಟ ಸಂಭವಿಸಿದೆ. ಬಿಹಾರ ಮೂಲದ 8 ಕಾರ್ವಿುಕರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಸ್ಫೋಟ ಸಂಭವಿಸಿದ ಪ್ರದೇಶದಲ್ಲಿ ಎಷ್ಟು ಜನ ಇದ್ದರು ಎಂಬುದು ಗೊತ್ತಾಗಿಲ್ಲ. ನಿನ್ನೆ ರಾತ್ರಿ 10. 30 ಸುಮಾರಿಗೆ ಈ ಘಟನೆ ನಡೆದಿದೆ. ಮೃತ ದೇಹಗಳು ಅಲ್ಲಲ್ಲಿ ಛಿದ್ರಗೊಂಡು ಬಿದ್ದಿರುವುದು ಘಟನೆಯ ಭೀಕರತೆಗೆ ಸಾಕ್ಷಿಯಾಗಿತ್ತು. ಸ್ಪೋಟದಿಂದಲೇ ದುರಂತ ಸಂಭವಿಸಿರುವುದು ದೃಢಪಟ್ಟಿದೆ. ಆದರೆ ಸ್ಪೋಟಕ್ಕೆ ಏನು ಕಾರಣ ಎಂಬುದು ಗೊತ್ತಾಗಿಲ್ಲ. ಲಾರಿಯಲ್ಲಿ ಸ್ಪೋಟಕಗಳನ್ನು ತರಲಾಗಿದ್ದು, ಸ್ಪೋಟದಿಂದಾಗಿ ಕೆಟ್ಟ ವಾಸನೆ ಉಂಟಾಗಿದ್ದು ಘಟನಾ ಸ್ಥಳಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ.ವಿಷಯ ತಿಳಿಯುತ್ತಿದ್ದಂತೆ ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಲಘು ಭೂಕಂಪದ ನಂತರ ಲಾರಿಯಲ್ಲಿನ ಜಿಲೆಟಿನ್ ಕಡ್ಡಿಗಳು ಸ್ಪರ್ಶಗೊಂಡು ಅನಾಹುತ ಸಂಭವಿಸಿರುವ ಸಾಧ್ಯತೆ ಇದೆ. ಕಿಲೋಮೀಟರ್ವರೆಗೆ ಮನೆಗಳ ಗಾಜು ಒಡೆದು ಹೋಗಿದ್ದು ಮನೆಗಳ ಗೋಡೆ ಬಿರುಕು ಬಿಟ್ಟಿವೆ ಎಂದು ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಹೇಳಿದ್ದಾರೆ.
ರಾತ್ರಿ 10.20ರ ಸಮಯದಲ್ಲಿ ಜಿಲ್ಲೆಯಾದ್ಯಂತ ಭೂಮಿ ಕಂಪಿಸಿ ದೊಡ್ಡ ಪ್ರಮಾಣದಲ್ಲಿ ಶಬ್ಧ ಉಂಟಾದಾಗ ಲಾರಿ ಕೂಡ ಅಲುಗಾಡಿ ಅದರಲ್ಲಿದ್ದ ಸ್ಪೋಟಕಗಳ ನಡುವೆ ಘರ್ಷಣೆಯಿಂದ ಈ ದುರಂತ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ.



