ಮಂಡ್ಯ: ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಗೆ ಬಿಜೆಪಿ ಮತ್ತೊಂದು ಶಾಕ್ ನೀಡಲು ಮುಂದಾಗಿದೆ. ಐಆರ್ ಎಸ್ ಅಧಿಕಾರಿಯಾಗಿದ್ದ ಲಕ್ಷ್ಮಿ ಅಶ್ವಿನ್ ಗೌಡ ಜೆಡಿಎಸ್ ತೊರೆದು ಬಿಜೆಪಿ ವೇದಿಕೆ ಸಿದ್ಧವಾಗಿದೆ.
ಭಾರತೀಯ ಕಂದಾಯ ಸೇವೆ (ಐಆರ್ಎಸ್) ಅಧಿಕಾರಿಯಾಗಿದ್ದ ಜೆಡಿಎಸ್ನಲ್ಲಿ ಗುರುತಿಸಿಕೊಂಡಿರುವ ಲಕ್ಷ್ಮಿ ಅಶ್ವಿನ್ ಗೌಡ್ ಬಿಜೆಪಿ ಸೇರಲು ಸನ್ನದ್ಧರಾಗಿದ್ದಾರೆ.ನಿನ್ನೆಯಷ್ಟೇ ಜೆಡಿಎಸ್ ತೊರೆದಿರುವ ಲಕ್ಷ್ಮಿ ಅವರು ಇಂದು ಅಧಿಕೃತವಾಗಿ ಬಿಜೆಪಿ ಸೇರಬೇಕಿತ್ತು. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಸೇರ್ಪಡೆಯ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಜೆಡಿಎಸ್ ಪಕ್ಷದ ವರಿಷ್ಠರ ಭರವಸೆ ಮೇರೆಗೆ ಉನ್ನತ ಹುದ್ದೆ ತ್ಯಜಿಸಿ ಬಂದಿದ್ದ ಲಕ್ಷ್ಮಿ ಅವರನ್ನು ಪಕ್ಷ ಕಡೆಗಣಿಸಿದ್ದೇ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಲಕ್ಷ್ಮಿ ಅವರಿಗೆ ತಮ್ಮ ಪಕ್ಷದಿಂದ ಟಿಕೆಟ್ ನೀಡುವುದಾಗಿ ಜೆಡಿಎಸ್ ಎರಡು ಬಾರಿ ಆಶ್ವಾಸನೆ ನೀಡಿದ್ದರೂ, ಆ ರೀತಿ ನಡೆಸಿಕೊಂಡಿರಲಿಲ್ಲ. ನಾಗಮಂಗಲ ವಿಧಾನಸಭಾ ಬಳಿಕ ಲೋಕಸಭಾದಿಂದ ಕಣಕ್ಕೆ ಇಳಿಸುವ ಆಶ್ವಾಸನೆ ನೀಡಿದ್ದರೂ ಪಕ್ಷ ಅದನ್ನು ಈಡೇರಿಸಿರಲಿಲ್ಲ. ಇನ್ನೂ ಲಕ್ಷ್ಮಿ ಅವರ ಜತೆಗೆ ಅಕ್ಷಯ ಗೋಲ್ಡ್ ಸಂಸ್ಥೆಯ ಮಾಲೀಕ ಸತೀಶ್ ಕೂಡ ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ.
ಮಂಡ್ಯದ ಮಳವಳ್ಳಿ ತಾಲೂಕಿನ ನಿಟ್ಟೂರಿನ ಕೋಡಹಳ್ಳಿ ಗ್ರಾಮದ ಲಕ್ಷ್ಮಿ ಅಶ್ವಿನಿ ಗೌಡ ಎಂಬಿಬಿಎಸ್ ಪದವೀಧರೆ. 2013ರಲ್ಲಿ ಯುಪಿಎಸ್ಸಿ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿಸಿ, 2015ರಲ್ಲಿ ಐಆರ್ಎಸ್ ಅಧಿಕಾರಿಯಾದರು. ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳ ಬದುಕು ಸುಧಾರಿಸಬೇಕೆಂಬ ಉದ್ದೇಶದಿಂದ ಹಾಗೂ ಜೆಡಿಎಸ್ ವರಿಷ್ಠರ ಆಶ್ವಾಸನೆಯಿಂದ 2017ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.



