ಡಿವಿಜಿಸುದ್ದಿ.ಕಾಂ, ದಾವಣಗೆರೆ: ಪ್ರತಿಯೊಬ್ಬರು ಗುರು-ಹಿರಿಯರ ಸೂಕ್ತ ಸಲಹೆ, ಅನುಭವ, ಮಾರ್ಗದರ್ಶನ ಪಡೆಯಬೇಕು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಕರುಣಾ ಜೀವ ಕಲ್ಯಾಣ ಟ್ರಸ್ಟ್ನ ಹಿರಿಯ ನಾಗರಿಕ ಪ್ರಶಸ್ತಿಯನ್ನು ಕಂಚಿಕೆರೆ ಸುಶೀಲಮ್ಮ, ಚಿಕ್ಕೋಳ್ ಈಶ್ವರಪ್ಪ, ಬುಳಸಾಗರ ಪಾಂಡುರಂಗಯ್ಯ, ಡಾ. ಶಶಿಧರ್ ತವಣೆ ಹಾಗೂ ಕೃಷಿ ರತ್ನ ಪ್ರಶಸ್ತಿಯನ್ನು ಗಾಯಿತ್ರಿ ಅವರಿಗೆ ವಿತರಿಸಿ ಮಾತನಾಡಿದರು.
ಎಲ್ಲರೂ ಮಾನವೀಯ ಮೌಲ್ಯಗಳನ್ನು ಗೌರವಿಸಬೇಕಿದೆ. ಮನುಷ್ಯರಾಗಬೇಕೆಂಬ ಪ್ರಯತ್ನಕ್ಕಿಂತ ಮೌಲ್ಯಯುತ ವ್ಯಕ್ತಿಯಾಗಬೇಕೆಂಬ ಹೋರಾಟ ಅರ್ಥಪೂರ್ಣ ಎಂದರು.
ಮುಖ್ಯ ಅತಿಥಿಗಳಾದ ಡಾ.ಹೆಚ್.ವಿ. ವಾಮದೇವಪ್ಪ ಮಾತನಾಡಿ, ವ್ಯಕ್ತಿ ವ್ಯಕ್ತಿಗಳ ನಡುವಿನ ಸಂಬಂಧ ಅತಿ ಮುಖ್ಯ. ಪ್ರೀತಿಯ ನಡೆ, ಸಕಾರಾತ್ಮಕ ದೃಷ್ಠಿ ಮತ್ತು ಸಹಾಯ ಹಸ್ತದಿಂದ ಸಂಬಂಧವನ್ನು ಮಧುರಗೊಳಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಶಾರದ ಶೆಟ್ಟಿ ಮಾತನಾಡಿ, ಕರುಣಾ ಜೀವ ಕಲ್ಯಾಣ ಟ್ರಸ್ಟ್ ನಿಸ್ವಾರ್ಥ ಸೇವೆ ಮಾಡುತ್ತಿದೆ. ಇನ್ನು ಹೆಚ್ಚಿನ ಸಮಾಜ ಮುಖಿ ಕೆಲಸಗಳು ಟ್ರಸ್ಟ್ ನಿಂದ ನಡೆಯಲಿ ಎಂದರು.
ಕಾರ್ಯಕ್ರಮದಲ್ಲಿ ಟ್ರಸ್ಟಿನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ, ಸಿ.ಜಿ ದಿನೇಶ್, ಮಂಜುಳ ಬಸವಲಿಂಗಪ್ಪ, ಡಾ. ಮಲ್ಲಿಕಾರ್ಜುನ್, ನಾಗರಾಜ, ಡಾ. ದೇವರಾಜ್, ಟ್ರಸ್ಟಿನ ದಾನಿಗಳಾದ ಡಾ ಬಿ.ಎಂ. ವಿಶ್ವನಾಥ್, ಡಾ. ವೀರಣ್ಣ ಗಡಾದ ಮತ್ತು ಹಿರಿಯ ನಾಗರಿಕರು ಭಾಗವಹಿಸಿದ್ದರು.



