ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ತೂಗುಯ್ಯಾಲೆಯಲ್ಲಿರುವಾಗಲೇ ಬಿಜೆಪಿಯಲ್ಲಿ ಟಾಕ್ ವಾರ್ ಶುರುವಾಗಿದೆ. ಕೇವಲ ಯಾರೋ ಒಬ್ಬರಿಂದ ಬಿಜೆಪಿ ಸರ್ಕಾರ ರಚನೆಯಾಗಿಲ್ಲಮ ಕಾರ್ಯಕರ್ತರ ಶ್ರಮದಿಂದ ಸರ್ಕಾರ ಬಂದಿದೆ ಎಂದು ಶಾಸಕ ರೇಣುಕಾಚಾರ್ಯ ಕಿಡಿಕಾರಿದರು. ಈ ಬೆಳವಣಿಗೆ ಬೆನ್ನಲ್ಲೇ ಸಚಿವ ರಮೇಶ್ ಜಾರಕಿಹೊಳಿ ದೆಹಲಿಗೆ ಧಿಡೀರ್ ಭೇಟಿ ನೀಡಿರುವುದು ಭಾರೀ ಕುತೂಹಲ ಮೂಡಿಸಿದೆ.
ವರಿಷ್ಠರ ಸೂಚನೆ ಮೇರೆಗೆ ಸಚಿವ ರಮೇಶ್ ಜಾರಕಿಹೊಳಿ ಇಂದು ದೆಹಲಿಗೆ ತೆರಳಿದ್ದು, ಸಂಪುಟ ವಿಸ್ತರಣೆ ಕಾಲ ಕೂಡಿ ಬಂದಂತಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಸೂಚನೆ ಮೇರೆಗೆ ಜಾರಕಿಹೊಳಿಗೆ ದೆಹಲಿಗೆ ತೆರಳಿದ್ದು, ಸಂಪುಟವಿಸ್ತರಣೆ ಕುರಿತಂತೆ ಮಾತುಕತೆ ನಡೆಸಲಿದ್ದಾರೆ. ನಿನ್ನೆಯಷ್ಟೇ ಮುಖ್ಯಮಂತ್ರಿ ಯಡಿಯೂರಪ್ಪ ಹಾಗು ಎರಡು ದಿನಗಳ ಹಿಂದೆ ಪಕ್ಷದ ರಾಷ್ಟ್ರೀಯ ಸಂಘಟನೆ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ಹಾಗು ಕೆಲವು ಸಚಿವರು, ಶಾಸಕರನ್ನು ಭೇಟಿಯಾಗಿದ್ದರು. ಇದರ ನಡುವೆಯೇ ಜಾರಕಿಹೊಳಿ ಏಕಾಏಕಿ ದೆಹಲಿಗೆ ತೆರಳಿದ್ದಾರೆ.
ಇದಕ್ಕೂ ಮುನ್ನ ಬೆಳಗ್ಗೆ ಸದಾಶಿವನಗರದ ತಮ್ಮ ನಿವಾಸದಲ್ಲಿ ಜಾರಕಿಹೊಳಿ ಅವರೊಂದಿಗೆ ಸಚಿವೆ ಶಶಿಕಲಾ ಜೊಲ್ಲೆ, ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ಶಾಸಕರಾದ ರಾಜುಗೌಡ ನಾಯಕ್ ಸೇರಿದಂತೆ ಮತ್ತಿತರ ಶಾಸಕರು ಸಭೆ ನಡೆಸಿದ್ದರು. ಇನ್ನೊಂದೆಡೆ ಸಚಿವ ಕೆ.ಎಸ್.ಈಶ್ವರಪ್ಪ ಅವರು ಬಿ.ಎಲ್.ಸಂತೋಷ್ ಅವರನ್ನು ಭೇಟಿಯಾಗಿದ್ದರೆ, ಇನ್ನು ಎಂ.ಪಿ.ರೇಣುಕಚಾರ್ಯ ತಮ್ಮ ನಿವಾಸದಲ್ಲಿ ಕೆಲಸ ಶಾಸಕರ ಜೊತೆ ಸಭೆ ನಡೆಸಿದ್ದಾರೆ. ಹೀಗೆ ಬಿಜೆಪಿ ವಲಯದಲ್ಲಿ ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಕುರಿತಂತೆ ಸಭೆಗಳು ನಡೆಯುತ್ತಿವೆ.
ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ರಮೇಶ್ ಜಾರಕಿಹೊಳಿ, ನಾನೇನೂ ಪ್ರಭಾವಿ ನಾಯಕನಲ್ಲ. ನನ್ನನ್ನು ಮಾಧ್ಯಮದವರೇ ಸ್ಟ್ರಾಂಗ್ ಎಂದು ಬಿಂಬಿಸಿಕೊಳ್ಳುತ್ತಿದ್ಧಾರೆ. ಅದಕ್ಕೆ ನಾನೇನು ಮಾಡಲಿ. ನಾನು ಡಿಸಿಎಂ ಸ್ಥಾನಕ್ಕೆ ಭೇಟಿ ಇಟ್ಟಿದ್ದೇನೆ ಎಂಬುದು ಆಧಾರ ರಹಿತ ಆರೋಪ. ಅಂತಹ ಯಾವುದೇ ಬೇಡಿಕೆಗಳನ್ನು ಇಟ್ಟಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿದ್ದೇನೆ ಎಂದರು.
105 ಶಾಸಕರಿಂದ ಸರ್ಕಾರ ರಚನೆಯಾಗಿದೆ ಎಂಬ ಶಾಸಕ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಹೇಳಿರುವುದರಲ್ಲಿ ಯಾವ ತಪ್ಪು ಇಲ್ಲ. 105ರ ಜೊತೆ 17 ಶಾಸಕರು ಸೇರಿ ಸರ್ಕಾರ ರಚನೆಯಾಯಿತು. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ಗೆ ಸಚಿವ ಸ್ಥಾನ ಕೊಡುವುದಕ್ಕೆ ಕೆಲವರು ವಿರೋಧಿಸುತ್ತಿದ್ದಾರೆ. ಕೊನೆಯವರೆಗೂ ನಾನು ಪ್ರಯತ್ನ ಮಾಡುತ್ತೇನೆ ಎಂದರು.



