ಡಿವಿಜಿಸುದ್ದಿ.ಕಾಂ, ದಾವಣಗೆರೆ: ನಿನ್ನೆ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿದಿದೆ. ಭಾರಿ ಮಳೆಯಿಂದ ರೈತರ ಮುಖದಲ್ಲಿ ಸಂತಸ ಮೂಡಿದ್ದು, ಕೆಲವು ಕಡೆ ಸಣ್ಣಪುಟ್ಟ ಅನಾಹುತವಾಗಿದೆ. ಎಷ್ಟೋ ವರ್ಷಗಳ ನಂತರ ಜಿಲ್ಲೆಯಲ್ಲಿ ಅಬ್ಬರದ ಮಳೆಯಾಗಿದ್ದರಿಂದ ಮೆಕ್ಕೆಜೋಳ, ಅಡಿಕೆ, ಕಬ್ಬು, ಭತ್ತದ ಬೆಳೆ ನಳನಳಿಸುತ್ತಿದ್ದು, ರೈತರಲ್ಲಿ ಹೊಸ ಭರವಸೆ ಮೂಡಿದೆ.
ಸತತ ಬರಗಾಲದಿಂದ ಅಂತರ್ಜಲ ಮಟ್ಟ ಕುಸಿತದ ಆತಂಕ್ಕೆ ಒಳಗಾಗಿದ್ದ ರೈತರಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಗಟ್ಟಿ ಮಳೆ ಸಂತಸ ತಂದಿದೆ. ಜಿಲ್ಲಾದ್ಯಂತ ಕೆರೆ –ಕಟ್ಟೆ, ಹಳ್ಳ-ಕೊಳ್ಳಗಳು ತುಂಬಿವೆ.

ನಿನ್ನೆ ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಅಣಜಿ ಮಾಯಕೊಂಡ ಸುತ್ತಮುತ್ತ ಕಳೆದ ರಾತ್ರಿ ಭಾರಿ ಮಳೆಯಿಂದ ಹಳ್ಳ-ಕೊಳ್ಳಗಳು ಭರ್ತಿಯಾಗಿವೆ.ರೈತರು ಬೆಳೆದ ಮೆಕ್ಕೆಜೋಳ , ಹತ್ತಿ ಸೇರಿದಂತೆ ಇತರ ಬೆಳೆಗಳಿಗೆ ನೀರು ನುಗ್ಗಿ ಕೆಲವೆಡೆ ಬೆಳೆ ಮುಳುಗಡೆ ಯಾಗಿವೆ.
ಹೆಬ್ಬಾಳು ಗ್ರಾಮದಲ್ಲಿ ಸುರಿದ ಮಳೆಗೆ ಶ್ರೀ ರುದ್ರೇಶ್ವರ ಪ್ರೌಢಶಾಲೆ ಆವರಣ ಜಲಾವೃತವಾಗಿದೆ. ಸುಮಾರು 10 ವರ್ಷಗಳ ನಂತರ ಸುರಿದ ಭಾರಿ ಮಳೆಗೆ ಹೆಬ್ಬಾಳ ಗ್ರಾಮಸ್ಥರು ಸಂತಸಗೊಂಡಿದ್ದಾರೆ. ಇನ್ನು ಮಲೇಬೆನ್ನೂರು ಗ್ರಾಮದ ಬಳಿ ಮನೆ ಗೋಡೆ ಕುಸಿದು ಇಬ್ಬರು ಗಾಯಗೊಂಡು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.



