ಬಾಗಲಕೋಟೆ: ಕರ್ನಾಟಕದಿಂದ ಬಾಂಗ್ಲಾದೇಶಕ್ಕೆ ಮೆಕ್ಕೆಜೋಳ ರಫ್ತು ಮಾಡಲಾಗಿದ್ದು, ಕರ್ನಾಟಕದಿಂದ ಇದೇ ಮೊದಲ ಬಾರಿಗೆ ರೈಲಿನ ಮೂಲಕ ಬಾಂಗ್ಲಾದೇಶಕ್ಕೆ ಮೆಕ್ಕೆಜೋಳ ರಫ್ತು ಮಾಡಲಾಗಿದೆ.
2500 ಟನ್ ಮೆಕ್ಕೆಜೋಳ ಹೊತ್ತ ರೈಲು ಬಾಗಲಕೋಟೆಯಿಂದ ಯಿಂದ ಸಂಚಾರವನ್ನು ಆರಂಭಿಸಿದೆ.42 ಬೋಗಿಗಳನ್ನು ಹೊಂದಿದ್ದ ರೈಲಿಗೆ ಶುಕ್ರವಾರ ಪೂಜೆ ಸಲ್ಲಿಸಿ ಕಳುಹಿಸಿಕೊಡಲಾಯಿತು. ಬಾಗಲಕೋಟೆ, ಗದಗ, ಧಾರವಾಡ, ಬೆಳಗಾವಿ, ವಿಜಯಪುರ ಜಿಲ್ಲೆಗಳ ರೈತರಿಂದ 2500 ಟನ್ ಮೆಕ್ಕೆಜೋಳ ಖರೀದಿ ಮಾಡಲಾಗಿದೆ.
ಪ್ರತಿ ಕ್ವಿಂಟಾಲ್ಗೆ 1400 ರಿಂದ 1450 ರೂ. ದರವನ್ನು ನೀಡಲಾಗಿದೆ.2010ರಿಂದ ಹಡಗುಗಳ ಮೂಲಕ ಬೇರೆ ಬೇರೆ ದೇಶಗಳಿಗೆ ಮೆಕ್ಕೆಜೋಳ ರಫ್ತು ಮಾಡಲಾಗುತ್ತಿತ್ತು. ಕಳೆದ ಮೂರು ವರ್ಷಗಳಿಂದ ರಫ್ತು ಸ್ಥಗಿತವಾಗಿತ್ತು. ವಿದೇಶದಲ್ಲಿಯೇ ಮೆಕ್ಕೆಜೋಳಕ್ಕೆ ಬೇಡಿಕೆ ಕಡಿಮೆಯಾಗಿತ್ತು.ಈ ಬಾರಿ ಪುನಃ ಬೇಡಿಕೆ ಹೆಚ್ಚಿದ್ದು 2500 ಟನ್ ಕಳುಹಿಸಲಾಗಿದೆ. ಈ ವರ್ಷದ ಹಂಗಾಮಿನಲ್ಲಿ 1 ಲಕ್ಷ ಟನ್ ರಫ್ತು ಮಾಡುವ ಗುರಿಯನ್ನು ಹೊಂದಲಾಗಿದೆ. ಬಾಗಲಕೋಟೆ ವರ್ತರು ವಿಯೆಟ್ನಾಂ, ಇಂಡೋನೇಷಿಯಾ ದೇಶಗಳಿಗೂ ಮೆಕ್ಕೆಜೋಳ ರಫ್ತು ಮಾಡುವ ಆಲೋಚನೆಯಲ್ಲಿದ್ದಾರೆ ಎಂಬುದು ಗೊತ್ತಾಗಿದೆ. ಈ ಮೂಲಕ ಮಕ್ಕೆಜೋಳ ಬೆಳೆದ ರೈತರಿಗೆ ಸಂತಸ ಮೂಡಿದೆ.



