ಡಿವಿಜಿ ಸುದ್ದಿ, ವಿಜಯಪುರ: ನಾನಂತೂ ಸಚಿವ ಆಗಲ್ಲ. ಅದಕ್ಕಾಗಿ ಯಾರ ಮನೆಗೆ ಹೋಗಿ ಕಾಲಿಗೂ ಬೀಳುವುದಿಲ್ಲ. ಕೈ ಮುಗಿದು ಕೇಳಿಕೊಳ್ಳುತ್ತೇನೆ ನವೆಂಬರ್ 25 ರವರೆಗೆ ಕಾಯಿರಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ವಸತಿ ಸಚಿವ ವಿ.ಸೋಮಣ್ಣ ಅವರೊಂದಿಗೆ ನಗರದಲ್ಲಿ ವಸತಿ ಯೋಜನೆ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೀಮಾ ನದಿ ಪ್ರವಾಹ ಸಂತ್ರಸ್ತರಿಗೂ 25 ಸಾವಿರ ರೂಪಾಯಿ ನೀಡುವ ಕುರಿತು ಸಿ.ಎಂ. ಯಡಿಯೂರಪ್ಪ ಸಚಿವ ಸೋಮಣ್ಣ ಅವರ ಮೂಲಕ ಸಂದೇಶ ಕಳಿಸಿದ್ದಾರೆ. ಹೀಗಾಗಿ ಪ್ರವಾಹ ಪರಿಹಾರ ನೀಡಿಕೆಯಲ್ಲಿ ತಾರತಮ್ಯ ನಿವಾರಣೆ ನಿರೀಕ್ಷೆ ಇದೆ ಎಂದರು.
ಈ ಹಿಂದೆ ಸಚಿವ ಸೋಮಣ್ಣ ಹಾಗೂ ನನ್ನ ಮಧ್ಯೆ ಉಂಟಾಗಿದ್ದ ಗಲಾಟೆಯನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಒಂದೇ ಮನೆಯಲ್ಲಿ ಇರುವ ತಂದೆ-ಮಕ್ಕಳು, ಅಣ್ಣ- ತಮ್ಮಂದಿರ ಮಧ್ಯೆ ಸಣ್ಣ ಪುಟ್ಟ ವ್ಯತ್ಯಾಸ ಇರುವುದು ಸಹಜ. ಇದೀಗ ನಮ್ಮ ಮಧ್ಯೆ ಅಂಥ ವ್ಯತ್ಯಾಸ ಏನೂ ಇಲ್ಲ ಎಂದು ಸಚಿವ ಸೋಮಣ್ಣ ಅವರನ್ನು ಹೊಗಳಿದರು.



