ಡಿವಿಜಿ ಸುದ್ದಿ, ದಾವಣಗೆರೆ: ಸದಾಶಿವ ಆಯೋಗ ವರದಿಯನ್ನು ಜಾರಿಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ಬದ್ಧವಾಗಿದೆ ಎಂಬ ಹೇಳಿಕೆ ನೀಡುವ ಮೂಲಕ ಎಸ್ ಸಿ ಜನಾಂಗಕ್ಕೆ ಅವಮಾನ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ಲಂಬಾಣಿ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾ. ಸದಾಶಿವ ಆಯೋಗದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು ಬಹಿರಂಗ ಪ್ರಚಾರ ಸಭೆಯಲ್ಲಿ ನೀಡಿರುವ ಹೇಳಿಕೆ ಖಂಡನೀಯ. ತಮ್ಮ ರಾಜಕೀಯ ಲಾಭಕ್ಕಾಗಿ ಕೆಲವು ಸಮಾಜವನ್ನು ತುಳಿಯುವುದು ಸರಿಯಲ್ಲ. ಕಟೀಲ್ ಅವರು ತಕ್ಷಣ ರಾಜೀನಾಮೆ ನೀಡಬೇಕು. ಇಲ್ಲದ್ದಿದ್ದರೆ ಬಹಿರಂಗ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಸಹೊದರರಂತೆ ಇದ್ದ ಜನಾಂಗದ ಮನದಲ್ಲಿ ವಿಷಬೀಜ ಬಿತ್ತುವುದು ಸರಿಯಲ್ಲ. ಇವರ ಸ್ವಾರ್ಥಕ್ಕಾಗಿ ಮುಖ್ಯಮಂತ್ರಿಗಳನ್ನು ಬಲಿ ಮಾಡಲು ಹೊರಟಿರುವುದು ಖಂಡನೀಯ. ಸಂವಿಧಾನ ಹಾಗೂ ಮೀಸಲಾತಿಯನ್ನು ನೀಡಿ ಸಮಾನತೆಯ ಆಶಾಭಾವನೆಯನ್ನು ಮೂಡಿಸಿದ ಡಾ. ಬಿ ಆರ್ ಅಂಬೇಡ್ಕರ್ ಆಶಯವನ್ನು ಹಾಳು ಮಾಡುವ ಕೆಲಸಕ್ಕೆ ಕೈ ಹಾಕಿರುವುದು ಎಷ್ಟು ಸರಿ. ಮಿಸಲಾತಿಯ ಬಗ್ಗೆ ಜ್ಞಾನವೇ ಇಲ್ಲದ ವ್ಯಕ್ತಿ ಬಹಿರಂಗ ಚುನಾವಣಾ ಪ್ರಚಾರದಲ್ಲಿ ಇಂತಹ ಹೇಳಿಕೆ ಯಾವ ಪರಿಣಾಮ ಬೀರಬಹುದೆಂಬ ಅರಿವಿಲ್ಲದಿರುವುದು ಶೋಚನೀಯ ಎಂದರು. ಈ ಸಂದರ್ಭದಲ್ಲಿ ವೆಂಕಟೇಶ್ ನಾಯ್ಕ್, ಕೆ.ಡಿ ನಾಯ್ಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



