ಡಿವಿಜಿ ಸುದ್ದಿ, ಹಾಸನ: ಜಿಲ್ಲೆ ಅರಸಿಕೆರೆ, ಹಾಸನ ನಗರ ಸಭೆಯಲ್ಲಿ ಬಿಜೆಪಿಗೆ ಬಹುಮತ ಇಲ್ಲದಿದ್ದರೂ, ಬಿಜೆಪಿ ಅಧಿಕಾರಕ್ಕೇರುವ ಅವಕಾಶ ಲಭ್ಯವಾಗಿದೆ. ಜೆಡಿಎಸ್ಗೆ ಮೀಸಲಾತಿ ಮೂಲಕ ಟಾಂಗ್ ನೀಡಿದ ಸರ್ಕಾರ ಹಾಸನ ಮತ್ತು ಅರಸೀಕೆರೆ ಎರಡೂ ನಗರಸಭೆಗೆ ಎಸ್.ಟಿ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ಮೀಸಲಾತಿ ಘೋಷಣೆ ಮಾಡಿದೆ.
ಈ ಕಾರಣದಿಂದ ಹಾಸನ ಮತ್ತು ಅರಸೀಕೆರೆ ಎರಡೂ ಕಡೆ ಬಿಜೆಪಿ ಅಧಿಕಾರಕ್ಕೇರಲಿದೆ. ಬಹಮತವಿದ್ದರೂ ಜೆಡಿಎಸ್ ಸದಸ್ಯರು ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿದ್ದಾರೆ. ಹಾಸನ ಮತ್ತು ಅರಸೀಕೆರೆ ಎರಡು ನಗರಸಭೆಗಳ ಅಧ್ಯಕ್ಷಗಾದಿ ಬಿಜೆಪಿ ಸದಸ್ಯರ ಪಾಲಾಗಲಿದೆ.
ಹಾಸನ ನಗರಸಭೆ ಒಟ್ಟು 35 ಸದಸ್ಯರ ಸಂಖ್ಯಾ ಬಲ ಹೊಂದಿದ್ದು ಜೆಡಿಎಸ್ನಿಂದ 17, ಕಾಂಗ್ರೆಸ್ಸಿನಿಂದ 02, ಬಿಜೆಪಿಯಿಂದ 13, ಹಾಗೂ 3 ಜನ ಸ್ವತಂತ್ರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ಆಯ್ಕೆಯಾಗಿರುವ 34ನೇ ವಾರ್ಡ್ ಮೋಹನ್ ಕುಮಾರ್ ಮಾತ್ರ ಎಸ್ಟಿ ಪಂಗಡದಿಂದ ಆಯ್ಕೆಯಾಗಿದ್ದಾರೆ. ಹೀಗಾಗಿ ಹಾಸನ ನಗರಸಭೆಯಲ್ಲಿ ಜೆಡಿಎಸ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಮೀಸಲಾತಿ ಕಾರಣದಿಂದ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಾದಂತಾಗಿದೆ.
ಅರಸೀಕೆರೆ ನಗರಸಭೆಯಲ್ಲಿ ಒಟ್ಟು 31 ಸದಸ್ಯರಿದ್ದು, ಜೆಡಿಎಸ್ 21, ಕಾಂಗ್ರೆಸ್ 01, ಬಿಜೆಪಿ 05, ಮೂವರು ಸ್ವತಂತ್ರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಆದರೆ 22ನೇ ವಾರ್ಡ್ ಬಿಜೆಪಿ ಸದಸ್ಯ ಗಿರೀಶ್ ಮಾತ್ರ ಎಸ್ಟಿ ಪಂಗಡಕ್ಕೆ ಸೇರಿದ್ದು, ಮೀಸಲಾತಿ ಕಾರಣದಿಂದ ಅರಸೀಕೆರೆಯಲ್ಲಿ ಕೇವಲ ಐವರು ಸದಸ್ಯರನ್ನು ಹೊಂದಿರೋ ಬಿಜೆಪಿಗೆ ಅಧ್ಯಕ್ಷ ಸ್ಥಾನ ಒಲಿದು ಬಂದಂತಾಗಿದೆ. ಇದರಿಂದ ಹಾಸನ ಜೆಡಿಎಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಎರಡು ನಗರ ಸಭೆಗಳು ಜೆಡಿಎಸ್ ನಿಂದ ಕೈ ತಪ್ಪಲು ಹಾಸನ ಶಾಸಕ ಪ್ರೀತಂಗೌಡ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತ ಸಂತೋಷ್ ಕಾರಣ ಎಂದು ಜೆಡಿಎಸ್ ಆರೋಪಿಸಿದೆ.



