ಡಿವಿಜಿ ಸುದ್ದಿ, ಬೆಂಗಳೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಸಮುದಾಯದ ಸ್ವಾಮೀಜಿಗಳ ಸಲಹೆಯಂತೆ ಹೋರಾಟದ ರೂಪುರೇಷೆ ರೂಪಿಸಲಾಗುವುದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ತಮ್ಮ ನಿವಾಸದಲ್ಲಿ ಭಾನುವಾರ ನಡೆದ ಸಮುದಾಯದ ಸ್ವಾಮೀಜಿಗಳು ಹಾಗೂ ಎಲ್ಲ ಪಕ್ಷದ ಪ್ರಮುಖರ ಸಭೆಯ ಬಳಿಕ ಮಾತನಾಡಿದ ಅವರು, ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕೆ ಆ ಸಮುದಾಯದ ಮುಖಂಡರು ಒಗ್ಗಟು ಪ್ರದರ್ಶಿಸಿದರು. ಇದರಿಂದ ಆ ಸಮುದಾಯಕ್ಕೆ ಮೀಸಲಾತಿ ಹೆಚ್ಚಳದ ಬಗ್ಗೆ ಸರ್ಕಾರ ತೀರ್ಮಾನ ಮಾಡಲು ಮುಂದಾಗಿದೆ. ಅದೇ ರೀತಿ ನಾವು ಕೂಡ ಹೋರಾಟ ರೂಪಿಸಬೇಕಿದೆ ಎಂದರು.
ವಿಧಾನ ಪರಿಷತ್ ಬಿಜೆಪಿ ಸದಸ್ಯ ಎಚ್. ವಿಶ್ವನಾಥ್ ಮಾತನಾಡಿ, ಎಸ್ಟಿಗೆ ಸೇರಿಸಿ ಎನ್ನುವುದು ಹೊಸ ಪ್ರಯತ್ನ ಅಲ್ಲ. ಹಿಂದೆಯೇ ಈ ಬಗ್ಗೆ ಹೋರಾಟ ಮಾಡಿದ್ದೇವೆ. ಈ ವಿಚಾರ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನಿರ್ಧಾರ ಮಾಡಬೇಕು. ಎಸ್ಟಿಗೆ ಸೇರಿಸುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ. ಅದಕ್ಕಾಗಿ ನಾವು ಹೋರಾಟ ಮಾಡಬೇಕು. ಇದು ಯಾರ ವಿರುದ್ಧದ ಹೋರಾಟ ಅಲ್ಲ. ಹೋರಾಟ ಮಾಡಲು ಇದು ಸೂಕ್ತ ಸಮಯ. ಈ ಕೆಲಸ ಈಗ ಆಗಿಲ್ಲದಿದ್ದರೆ ಮುಂದೆ ಆಗಲ್ಲ ಎಂದು ಹೇಳಿದರು.
ಜೆಡಿಎಸ್ ಶಾಸಕ ಬಂಡೆಪ್ಪ ಕಾಶಂಪುರ ಮಾತನಾಡಿ, ಒಂದೇ ಧ್ವನಿಯಿಂದ ನಾವು ಹೋರಾಟ ಮಾಡಬೇಕು. ಇದು ಹೊಸ ಹೋರಾಟ ಅಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಸ್ವಾತಂತ್ರ ಪೂರ್ವದಿಂದ ಈ ಹೋರಾಟ ನಡೆಯುತ್ತಿದೆ. ನಮ್ಮ ಸಮಾಜ ಎಸ್ಟಿ ಗೆ ಸೇರಬೇಕು ಎಂದರು.
ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಯಾವ ಸಮಾಜದಲ್ಲಿ ಸಾಂಘಿಕ ಹೋರಾಟ ಇರುವುದಿಲ್ಲವೋ ಅಂತ ಸಮಾಜದಲ್ಲಿ ಒಗ್ಗಟು ಇರಲ್ಲ. ಎಲ್ಲರೂ ಜೊತೆ ಸೇರಿ ಈ ಹೋರಾಟ ಮಾಡಬೇಕು ಎಂದರು.



