ನವದೆಹಲಿ: ಕೊರೊನಾದಿಂದ ನಿಧನರಾಗಿರುವ ಕೇಂದ್ರ ಸಚಿವ ಸುರೇಶ್ ಅಂಗಡಿಯ ಅವರ ಅಂತ್ಯಕ್ರಿಯೆ ದೆಹಲಿಯಲ್ಲಿ ನಡೆಯಲಿದೆ.
ಕೊರೊನಾ ನಿಯಮಗಳನ್ವಯ ಸೋಂಕಿತರ ಮೃತದೇಹ ಸಾಗಿಸುವಂತಿಲ್ಲ. ಹೀಗಾಗಿ ಇಂದು ದೆಹಲಿಯ ಲೋಧಿ ಎಸ್ಟೇಟ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.ವಿಮಾನದಲ್ಲಿ ಪಾರ್ಥಿವ ಶರೀರ ಸಾಗಿಸಲು ಎಂಬಾಲ್ಮಿಂಗ್ ಮಾಡಬೇಕು. ಆದರೆ, ಕೊರೊನಾ ಕೊರೊನಾ ಸೋಂಕಿತರ ಪಾರ್ಥೀವ ಶರೀರ ಎಂಬಾಲ್ಮಿಂಗ್ ಮಾಡಲು ಸಾಧ್ಯವಿಲ್ಲ.
ಇನ್ನು ರಸ್ತೆ ಮೂಲಕ ಸಾಗಿಸಲು 48 ಗಂಟೆಗೂ ಅಧಿಕ ಸಮಯ ಬೇಕು. ಹೀಗಾಗಿ ಏಮ್ಸ್ ವೈದ್ಯರು ದೆಹಲಿಯಲ್ಲಿ ಅಂತ್ಯಕ್ರಿಯೆ ನಡೆಸುವ ಬಗ್ಗೆ ಸೂಚನೆ ನೀಡಿದ್ದಾರೆ.
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಆಗಮಿಸಿ ಸುರೇಶ್ ಅಂಗಡಿ ಕುಟುಂಬಸ್ಥರು ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ರಾಜ್ಯ ಸಂಸದರು, ರಾಜ್ಯ ಸಚಿವರು, ಬಿಜೆಪಿಯ ಗಣ್ಯರು ಏಮ್ಸ್ ಆಸ್ಪತ್ರೆಗೆ ಆಗಮಿಸಿ ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ಕೊರೊನಾ ಸೋಂಕಿತರಾಗಿದ್ದ ಸುರೇಶ್ ಅಂಗಡಿಯವರನ್ನು ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಿಸದೆ ಸಚಿವರು ಸಾವನ್ನಪ್ಪಿದ್ದಾರೆ. 65 ವರ್ಷ ವಯಸ್ಸಿನ ಸುರೇಶ್ ಅಂಗಡಿ, 4 ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ, ಸುರೇಶ್ ಅಂಗಡಿ ಅವರು ಜನಮನ್ನಣೆಗೆ ಪಾತ್ರರಾಗಿದ್ದರು. ತಾಯಿ, ಪತ್ನಿ, ಇಬ್ಬರು ಪುತ್ರಿಯರನ್ನು ಸಚಿವ ಸುರೇಶ್ ಅಂಗಡಿ ಅಗಲಿದ್ದಾರೆ. ಸಂಸತ್ ಅಧಿವೇಶನ ಆರಂಭಕ್ಕೂ ಮುನ್ನ ಕೋವಿಡ್ ಟೆಸ್ಟ್ ಮಾಡಿಸಿದ್ದ ಅಂಗಡಿಯವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು.